ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆತಿಥ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಿವಿಎಸ್ ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಢಶಾಲೆ ವಡೇರಹೋಬಳಿ ಶಾಲೆಯ ವಿದ್ಯಾರ್ಥಿ ಓಟದಲ್ಲಿ 2 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿ ವಿಠಲ ಬಾಳಪ್ಪ ಮುನವಳ್ಳಿ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 3,000ಮೀ ಓಟದಲ್ಲಿ ಪ್ರಥಮ,1,500 ಮೀ ಓಟದಲ್ಲಿ ಪ್ರಥಮ ಹಾಗೂ 800 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನ ಗಳಿಸಿ ಹಾಸನದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತ ವಿದ್ಯಾರ್ಥಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಿವಾಸಿ ಬಾಳಪ್ಪ ಮತ್ತು ಯಲ್ಲವ್ವಾ ದಂಪತಿಯ ಪುತ್ರ. ವಿದ್ಯಾರ್ಥಿಗೆ ವಡೇರಹೋಬಳಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾ ಮತ್ತು ತರಬೇತುದಾರರಾಗಿ ಸತೀಶ್ ಚಿಕ್ಕಮಗಳೂರು ಮಾರ್ಗದರ್ಶನ ನೀಡಿದ್ದರು.
ಶಾಲಾ ಅಧ್ಯಾಪಕರು,ಎಸ್ ಡಿ ಎಂ ಸಿ, ಹಳೆ ವಿದ್ಯಾರ್ಥಿ ಸಂಘ, ವಿದ್ಯಾರ್ಥಿಗಳು ಹಾಗೂ ಶ್ರೀ ಬಸವೇಶ್ವರ ಯುವಕ ಮಂಡಲ ಮತ್ತು ಬಸವೇಶ್ವರ ಭಜನಾ ಮಂಡಳಿ (ರಿ.) ಟಿ.ಟಿ. ರಸ್ತೆ, ಭರತ್ಕಲ್ ಕುಂದಾಪುರ, ಜೈ ಶಿವಾಜಿ ಕ್ರಿಕೆಟರ್ಸ್ ಮತ್ತು ಜೈ ಶಿವಾಜಿ ಗಣೇಶೋತ್ಸವ ಸಮಿತಿ(ರಿ.) ಟಿ.ಟಿ ರಸ್ತೆ ಕುಂದಾಪುರ,ಟಿ.ಟಿ.ಫ್ರೆಂಡ್ಸ್ ಟಿ.ಟಿ.ರಸ್ತೆ. ಕುಂದಾಪುರ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ವಿದ್ಯಾರ್ಥಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.











