ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕೋಡಿ ಕನ್ಯಾಣದಲ್ಲಿ ಶನೀಶ್ವರ ದೇಗುಲದ ಬಳಿ ಇದೇ ಬರುವ ಡಿ.21ರಂದು ನಡೆಯಲಿರುವ ತಿರುಪತಿ ಶ್ರೀ ದೇವರ ಉಂಜಲೋತ್ಸವ ನಡೆಯುವ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಮಣೂರು ಫ್ರೆಂಡ್ಸ್ ಸಹಯೋಗದೊಂದಿಗೆ 283ನೇ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನದ ಮೂಲಕ ಹಮ್ಮಿಕೊಂಡಿತು.
ಕೋಡಿ ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ ಅಭಿಯಾನಕ್ಕೆ ಚಾಲನೆ ನೀಡಿ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಕೇಂದ್ರಗಳನ್ನು ಪಂಚವರ್ಣ ಸಂಘಟನೆ ಸ್ವಚ್ಛಗೊಳಿಸುವ ಮೂಲಕ ಭಗವಂತನ ಸೇವೆಯನ್ನು ಸಾಕ್ಷಾತ್ಕಾರಗೊಳಿಸಿದ್ದಾರೆ. ಪಂಚವರ್ಣ ಸಂಘಟನೆ ನಿತ್ಯನಿರಂತರ ಸೇವಾಕಾರ್ಯ ಹಮ್ಮಿಕೊಳ್ಳುತ್ತಿರುವುದು ಸುಲಭದ ಮಾತಲ್ಲ. ಪರಿಸರವನ್ನು ಹಸಿರಾಗಿಸಿ, ಸ್ವಚ್ಛವಾಗಿರಿಸಿಕೊಳ್ಳುವ ಇಂತಹ ಯುವ ಸಮೂಹ ಗ್ರಾಮ ಗ್ರಾಮಗಳಲ್ಲಿ ಹುಟ್ಟಿಕೊಳ್ಳಲಿ ಎಂದು ಹಾರೈಸಿದರು.
ಕೋಡಿ ಶನೀಶ್ವರ ದೇಗುಲದ ಅಧ್ಯಕ್ಷ ಗೋಪಾಲ ಪೂಜಾರಿ, ಗ್ರಾಮದ ಪ್ರಮುಖರಾದ ರವಿ ಅಮೀನ್, ಉದಯ್ ಕಾಂಚನ್, ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷರಾದ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸಂಚಾಲಕಿ ಸುಜಾತ ಬಾಯರಿ, ಕೋಡಿ ಹೊಸಬೇಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಮತ್ತಿತರರು ಇದ್ದರು. ಕಾರ್ಯಕ್ರಮವನ್ನು ಪ್ರಶಾಂತ್ ಪಡುಕರೆ, ರವೀಂದ್ರ ಕೋಟ ಸಂಯೋಜಿಸಿದರು.











