ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸ್ವಾರ್ಥ ಬಿಟ್ಟು ಈ ಸಮಾಜದಲ್ಲಿ ನಿಸ್ವಾರ್ಥಸೇವೆಯ ಮೂಲಕ ಪಂಚವರ್ಣ ಸಂಘಟನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ, ನ್ಯಾಯವಾದಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.
ಕೋಟದ ಪಂಚವರ್ಣ ಸಂಘಟನೆಯ ಸದಸ್ಯೆ ಸುಜಾತ ಬಾಯರಿ ಇವರ ಹುಟ್ಟುಹಬ್ಬವನ್ನು ಬಡ ಅಶಕ್ತ ಕುಟುಂಬಕ್ಕೆ ದಿನಸಿ ಪರಿಕರ ಹಾಗೂ ಆರ್ಥಿಕ ಸಹಾಯಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿ ಭಗವಂತನಿಗೆ ಅತಿ ಹತ್ತಿರ ಕಾರ್ಯ ಎಂದರೆ ಅದು ಬಡ ಹಾಗೂ ನಿರ್ಗತಿಗರಿಗೆ ಸಹಾಯ ಮಾಡುವ ಸೇವೆ. ಅದೇ ಪಂಚವರ್ಣ ಸಂಘಟನೆ ಹಲವು ಕಾರ್ಯಕ್ರಮಗಳಲ್ಲಿ ಈ ಹುಟ್ಟು ಹಬ್ಬ ಆಚರಣೆ ವಿಶೇಷವಾಗಿ ಗಮನ ಸೆಳೆದಿದೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಇಲ್ಲಿನ ಅಶಕ್ತ ಕುಟುಂಬದ ಸದಸ್ಯೆ ವಿಜಯಲಕ್ಷ್ಮಿ ದಿನಸಿ ಪರಿಕರ ಹಾಗೂ ಆರ್ಥಿಕಸಹಾಯವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸುಜಾತ ಬಾಯರಿ ದೀಪ ಬೆಳಗಿಸಿ ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬವನ್ನು ಈ ರೀತಿಯ ಸೇವೆಯ ಮೂಲಕ ಆಚರಿಸಿಕೊಳ್ಳಿ ಸಾರ್ಥಕತೆ ಕಾಣಿ ಎಂದರು.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ,ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಇದ್ದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.











