ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೋಟದ ಮಹಿಳಾ ಮಂಡಲಕ್ಕೆ ತನ್ನದೆ ಆದ ವಿಶಿಷ್ಟ ಕಾರ್ಯಕ್ರಮಗಳಿಂದ ಈ ಸಮಾಜದಲ್ಲಿ ಗುರುತಿಸಿಕೊಂಡಿದೆ. ಈ ಸಂಸ್ಥೆ ನಮ್ಮೂರಿನ ಅತಿ ಹಿರಿಯ ಸಂಸ್ಥೆ ಎಂಬ ಹೆಗ್ಗಳಿಕೆ ಇದೆ ಎಂದು ಕೋಟದ ಧರ್ಮರತ್ನಾಕರ ಆನಂದ್ ಸಿ. ಕುಂದರ್ ಹೇಳಿದರು.
ಕೋಟದ ಅಮೃತೇಶ್ವರೀ ದೇಗುಲದ ಸಮೀಪ ಕೋಟ ಮಹಿಳಾಮಂಡಲ ಇದರ 61ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಸಹಾಯಹಸ್ತದ ಜೊತೆ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಈ ಸಂಸ್ಥೆ ಕ್ರಿಯಾಶೀಲ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ಕುಂದಾಪುರದ ಪ್ರಸಿದ್ಧ ಲೆಕ್ಕಪರಿಶೋಧಕರಾದ ಟಿ.ಎನ್ ಪ್ರಭು ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರ ಸ್ಥಾನಮಾನ ಈ ಸಮಾಜದಲ್ಲಿ ಮಹಿಳೆಯನ್ನು ಯಾವರೀತಿಯಲ್ಲಿ ಗೌರವಿಸಲಾಗುತ್ತದೆ. ಭಗವದ್ಗೀತೆಯ ಕೆಲ ಮೂಲ ಸಾರಾಂಶವನ್ನು ಸಭೆಯಲ್ಲಿ ಮುಂದಿಟ್ಟರು.
ಇದೇ ವೇಳೆ ಮಹಿಳಾ ಮಂಡಲದ ಸದಸ್ಯೆ ಸುಶೀಲ ನಾಗೇಶ್ ಇವರನ್ನು ಸಾಧಕ ಮಹಿಳಾ ಗೌರವ ನೀಡಿ ಸನ್ಮಾನಿಸಲಾಯಿತು. ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆನಂದ್ ಸಿ ಕುಂದರ್ ಇವರನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಮಹಿಳಾಮಂಡಲದ ಅಧ್ಯಕ್ಷೆ ಗೀತಾ ಎ ಕುಂದರ್ ವಹಿಸಿದ್ದರು.
ಸಂಘದ ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಮಹಿಳಾಮಂಡಲದ ಹಿರಿಯ ಸದಸ್ಯೆ ಭಾಗ್ಯವಾದಿರಾಜ್ ನಿರೂಪಿಸಿದರು. ಹಿರಿಯ ಸದಸ್ಯೆ ಚಂದ್ರಿಕಾ ಭಟ್ ವಂದಿಸಿದರು. ಮಹಿಳಾ ಮಂಡಲದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸದಾರಮೆ ಕಾರಂತ ನಿರ್ವಹಿಸಿದರು.











