ಕುಂದಾಪುರ ಮಿರರ್ ಸುದ್ದಿ…
ಕೋಟ: ಲಿಂಗ ಸಮಾನತೆ ಎಂಬುದು ಮನೆಯಿಂದಲೇ ಆರಂಭಗೊಳ್ಳಬೇಕು. ಪರುಷ-ಮಹಿಳೆ ಎಂಬ ಭೇದ-ಭಾವವಿಲ್ಲದೆ ಎಲ್ಲರೂ ಜಾಗೃತರಾದಾಗ ಲಿಂಗಸಮಾನತೆಯ ಕನಸು ಸಾಕಾರಗೊಂಡು ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆಂದು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ನಿರ್ದೇಶಕಿ ವೈಷ್ಣವಿ ರಕ್ಷಿತ್ಕುಂದರ್ ಹೇಳಿದರು.
ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಸ.ಪ್ರ.ದ ಕಾಲೇಜಿನ, ಐ.ಕ್ಯೂ.ಎ.ಸಿ ಘಟಕ, ರಾಷ್ಟ್ರೀಯ ಸೇವಾಯೋಜನೆ ಘಟಕ 1 ಮತ್ತು 2 ಹಾಗೂ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆಯುವ ‘ಲಿಂಗ ಸಮಾನತೆಯ ಅರಿವು ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು.
ಮುಖ್ಯತಿಥಿಗಳಾದ ಆಗಮಿಸಿದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಕುಂದಾಪುರ, ಇಲ್ಲಿನ ಶಿಶು ಅಭಿವೃದ್ಧಿ ಅಧಿಕಾರಿ ಶ್ವೇತಾ.ಎನ್ ಸರಕಾರ ಮಹಿಳೆ ಮತ್ತು ಶಿಶು ಅಭಿವೃದ್ಧಿ ಗೋಸ್ಕರ ಹಲವಾರು ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಪೂರ್ಣ ಪ್ರಯೋಜನ ಪಡೆಯುವಂತೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ.ವಿ.ಗಾಂವಕರ ಶಿಕ್ಷಣ ಪಡೆಯುವುದರೊಂದಿಗೆ ಮಹಿಳೆಯರು ಆರ್ಥಿಕವಾಗಿ, ರಾಜಕೀಯವಾಗಿ ಸಬಲರಾಗಿ ಸಾರ್ಥಕ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಸೇವಾ ಯೊಜನೆ ಘಟಕ 1ರ ಯೋಜನಾಧಿಕಾರಿ ಅನಂತ್ಕುಮಾರ್ ಸಿ.ಎಸ್ ಸ್ವಾಗತಿಸಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಮಹಿಳಾ ವೇದಿಕೆಯ ಸಂಚಾಲಕರಾದ ಡಾ. ಸುನೀತಾ.ವಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಮಹತ್ವ ತಿಳಿಸಿದರು. ಕು. ಕೃತ್ತಿಕಾ ಕಾರ್ಯಕ್ರಮ ನಿರೂಪಿಸಿದರು, ಕು. ಪಲ್ಲವಿ ಧನ್ಯವಾದಗೈದರು. ಐ.ಕ್ಯೂ.ಎ.ಸಿ ಸಂಚಾಲಕ ಡಾ. ಸುಬ್ರಹ್ಮಣ್ಯ.ಎ ಹಾಗೂ ರಾಷ್ಟ್ರೀಯ ಸೇವಾ ಯೊಜನೆ ಘಟಕ 2ರ ಯೋಜನಾಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮನೋಜ್ಕುಮಾರ್ ಎಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.











