ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ, ಹರವರಿ ವಂಡ್ಸೆ ಇವರ ನೇತೃತ್ವದಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಹಾಗೂ ತೆಂಕು-ಬಡಗಿನ ಪ್ರಸಿದ್ಧ ಕಲವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ, ಯಕ್ಷ ಹೆಜ್ಜೆ-2, ಹಿರಿಯ ಕಲಾವಿದರಿಗೆ ಸನ್ಮಾನ, ಆಸಕ್ತರಿಗೆ ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮ ಆ.16ರಂದು ವಂಡ್ಸೆಯ ಉಪಾಧ್ಯಾಯರ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಹಾಗೂ ವಿದ್ಯಾಧರ ರಾವ್ ಜಲವಳ್ಳಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತ್ಯುತ್ತರ ನೀಡಿದ ಸುಣ್ಣಂಬಳ ವಿಶ್ವೇಶ್ವರ ಭಟ್, ಕಲೆ, ಕಲಾವಿದ, ಕಲಾಭಿಮಾನಿ ಈ ಮೂರು ತ್ರೀಕೋನವಾದ ಸಂಬಂಧ ಸಮನ್ವಯತೆಯಿಂದ ಸಾಗಿದಾಗ ಯಶಸ್ಸು ಸಾಧ್ಯ. ಸದಾ ಸರ್ವದಾ ಈ ಸಂಸ್ಥೆಯವರ ಕಲಾ ಕೈಂಕರ್ಯ ನಿರಂತರವಾಗಿ ಸಾಗಲಿ, ಕಲಾಭಿಮಾನಿಗಳು ಇವರ ಕಲಾಸೇವೆಗೆ ತನುಮನಧನ ಸಹಕಾರ ನೀಡುವುದರ ಮೂಲಕ ಪ್ರೋತ್ಸಾಹಿಸಲಿ ಎಂದರು.
ಸನ್ಮಾನ ಸ್ವೀಕರಿಸಿದ ಇನ್ನೋರ್ವ ಕಲಾವಿದ ವಿದ್ಯಾಧರ ರಾವ್ ಅವರು ಮಾತನಾಡಿ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಇರುವ ನನಗೆ ಈ ಸನ್ಮಾನ ಹೆಚ್ಚಿನ ಮಹತ್ವಿಕೆಯನ್ನು ತಂದುಕೊಟ್ಟಿದೆ. ತುಂಬು ಪ್ರೇಕ್ಷಕರ ಮುಂದೆ ಸನ್ಮಾನ ಸ್ವೀಕರಿಸುವಂತ ಈ ಕ್ಷಣವನ್ನು ಎಂದೂ ಮರೆಯಲಾಗುವುದಿಲ್ಲ. ಈ ಸಂಸ್ಥೆಯ ಮೂಲಕ ಕಲಾ ಸೇವೆ ನಿರಂತರವಾಗಿ ಸಾಗಲಿ ಎಂದರು.
ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದ ಮುಖ್ಯಸ್ಥರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಶುಭ ಹಾರೈಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿಗಳಾದ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ.ಅತುಲ್ ಕುಮಾರ್ ಶೆಟ್ಟಿ, ನಿರಾಮಯ ಸೊಸೈಟಿ ವಂಡ್ಸೆ ಇದರ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಉಪಾಧ್ಯಾಯ, ನಾಗರಾಜ ಮಂಜ ಮಾರಣಕಟ್ಟೆ, ಆಶೀರ್ವಾದ್ ಫ್ರೆಂಡ್ಸ್ ಗೌರವಾಧ್ಯಕ್ಷ ಗೋಪಾಲ ಎ.ಜಿ., ಆಶೀರ್ವಾದ್ ಫ್ರೆಂಡ್ಸ್ ಅಧ್ಯಕ್ಷರಾದ ಮಹೇಶ ಗಾಣಿಗ ಅಬ್ಬಿ, ವಿಜಯ ಪೂಜಾರಿ, ಸಂಸ್ಥೆಯ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಶಕ್ತರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಅರ್ಥಧಾರಿ ಸತೀಶ ಶೆಟ್ಟಿ ಮೂಡುಬಗೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಯಕ್ಷಹೆಜ್ಜೆ2 ಅಂಗವಾಗಿ ಹರಿಭಕ್ತ ಚಂದ್ರಹಾಸ, ಹರಭಕ್ತ ವೀರಮಣಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. 2500ಕ್ಕೂ ಹೆಚ್ಚು ಪ್ರೇಕ್ಷಕರು ಯಕ್ಷಗಾನ ವೀಕ್ಷಿಸಿಸಿದರು.












