ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಹದ್ದಿನಬೆಟ್ಟು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವದ ಪ್ರಶಸ್ತಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸೇವೆ ಮಾಡುವ ಕಾಯಕ ಭಗವಂತನಿಚ್ಛೆ ನಾನು ಇಲ್ಲಿ ಮಧ್ಯವರ್ತಿ ಅಷ್ಟೆ ಎಂದು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ಹದ್ದಿನಬೆಟ್ಟು ಅಧ್ಯಕ್ಷ ಅವಿನಾಶ್ ಶೆಟ್ಟಿ ಗುಂಡ್ಮಿ ಅಭಿಪ್ರಾಯಪಟ್ಟರು.
ಸೋಮವಾರ ಇಲ್ಲಿನ ಹದ್ದಿನಬೆಟ್ಟು ಸಾಮೂಹಿಕ ಶ್ರೀ ಗಣೇಶ ಆರಾಧನೋತ್ಸವ ಸಮಿತಿ ವತಿಯಿಂದ 29ನೇ ವರ್ಷದ ಶ್ರೀ ಗಣೇಶ ಆರಾಧನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ತನ್ನ ಫೌಂಡೇಶನ್ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುವುದರ ಜತೆಗೆ ಸಾಮಾಜಿಕ ಕಾರ್ಯದೊಂದಿಗೆ ಗಣೇಶೋತ್ಸವ ಕಾರ್ಯಕ್ರಮ ಹದ್ದಿನಬೆಟ್ಟಿನಲ್ಲಿ ಸರ್ವಧರ್ಮ ಸಮನ್ವಯ ಕೇಂದ್ರವಾಗಿ ರೂಪುಗೊಂಡು ಸಾಮರಸ್ಯ ಜೀವನಕ್ಕೆ ಮುನ್ನುಡಿ ಬರೆಯುತ್ತಿರುವುದು ಉತ್ಸವದ ಮೆರಗನ್ನು ಹೆಚ್ಚಿಸಿದೆ ಎಂದರು.
ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ 50ಸಾವಿರ ನಗದು ಪುರಸ್ಕಾರದೊಂದಿಗೆ ಶ್ರೀ ಗಣೇಶ ಆರಾಧನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಾಜಬ್ಬ ಮಾತನಾಡಿ ನಮ್ಮೂರಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಇಚ್ಛೆಯಿಂದ ಕಿತ್ತಳೆ ಮಾರಿ ಶಾಲೆ ಕಟ್ಟದ್ದೇನೆ ಆಗಿನ ಶಾಸಕ ಯು.ಟಿ ಫರೀದ್ ಸೇರಿದಂತೆ ಅನೇಕ ಜನರು ಕೈಜೋಡಿಸಿದರು.ಇಂದು ಇಲ್ಲಿನ ಪ್ರಶಸ್ತಿ ಶೈಕ್ಷಣಿಕ ಕಾರ್ಯಕ್ಕೆ ವೇಗ ನೀಡಿದೆ ಎಂದರು.
ಯುವ ಕಲಾವಿದ ನಿರಜ್ ಹರೇಕಳ ಹಾಜಬ್ಬರಿಗೆ ತಾವು ರಚಿಸಿದ ಚಿತ್ರವನ್ನು ಹಸ್ತಾಂತರಿಸಿದರು.
ಸಾನ್ವಿ ಗ್ರೂಪ್ ಅವಿನಾಶ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಶೈಕ್ಷಣಿಕ ದತ್ತುಸ್ವೀಕಾರ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯ 30 ವಿದ್ಯಾರ್ಥಿಗಳಿಗೆ 5 ಸಾವಿರ ರೂ.ಗಳಂತೆ ವಿದ್ಯಾರ್ಥಿ ವೇತನ ವಿತರಣೆ,ಎರಡು ಸ್ಥಳೀಯ ಸರಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಒಂದು ವರ್ಷದ ಮಾಸಿಕ ಗೌರವ ವೇತನ, 6 ಜನ ಅನಾರೋಗ್ಯ ಪೀಡಿತರಿಗೆ ಸಹಾಯನಿಧಿ ವಿತರಣೆ ಜತೆಗೆ ಹಲವು ಸಾಮಾಜಿಕ ಕಾರ್ಯಗಳು ಈ ವೇದಿಕೆಯಲ್ಲಿ ನೀಡಲಾಯಿತು.
ಉತ್ಸವದ ಅಂಗವಾಗಿ ಹಮ್ಮಿಕೊಂಡ ಕ್ರೀಡಾ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ಎಸ್ ಎಂಎಸ್ ಕಾಲೇಜಿನ ಪ್ರಾಂಶುಪಾಲ ಡಾ.ರಾಬರ್ಟ್ ರೋಡ್ರಿಗಸ್ ವಹಿಸಿ ಶುಭಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ,ರಥಶಿಲ್ಪಿ ರಾಜಗೋಪಾಲ್ ಆಚಾರ್ಯ ಉಪಸ್ಥಿತರಿದ್ದರು.
ಸಮಿತಿ ಕಾರ್ಯದರ್ಶಿ ಚಂದ್ರ ಮೊಗವೀರ ಸ್ವಾಗತಿಸಿ ಬಹುಮಾನ ಪತ್ರವಾಚಿಸಿ ವಂದಿಸಿದರು. ಸಮಿತಿಯ ಸೂರಜ್ ವಿದ್ಯಾರ್ಥಿವೇತನದ ಪಟ್ಟಿ ವಾಚಿಸಿದರು. ಅಶೋಕ್ ಭಂಡಾರಿ ಲೆಕ್ಕಪತ್ರ ವಾಚಿಸಿದರು.
ಕಾರ್ಯಕ್ರಮವನ್ನು ಸಮಿತಿಯ ಗೌರವಾಧ್ಯಕ್ಷ ರಾಮದೇವ ಐತಾಳ್ ಪ್ರಶಸ್ತಿ ಪತ್ರ ವಾಚಿಸಿ ನಿರೂಪಿಸಿದರು.












