ಕುಂದಾಪುರ ಮಿರರ್ ಸುದ್ದಿ….
ಉಡುಪಿ: ಕಲ್ಮಾಡಿಯಲ್ಲಿನ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮತ್ತು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಸುವರ್ಣ ಮಹೋತ್ಸವದ ಸಂಧರ್ಭ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಆದಿವುಡುಪಿ ಜಂಕ್ಷನ್ ನಿಂದ ಕಲ್ಮಾಡಿ ಚರ್ಚಿನವರೆಗೆ ನಡೆಯಿತು.

ಮೆರವಣಿಗೆಗೆ ಚಾಲನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಘುಪತಿ ಭಟ್ರವರು ನೀಡಿದರು. ಈ ಸಂಧರ್ಭದಲ್ಲಿ ಅವರು ತಮ್ಮ ಕಾಲೇಜು ದಿನಗಳಲ್ಲಿ ಹೊಸವರುಷದಂದು ಕಲ್ಮಾಡಿ ಚರ್ಚಿಗೆ ಭೇಟಿ ನೀಡುತ್ತಿದ್ದನ್ನು ನೆನೆಸಿಕೊಂಡರು. ಉಡುಪಿ ಧರ್ಮಕ್ಷೇತ್ರದಲ್ಲಿ ಅತ್ತೂರು, ಕೆರೆಕಟ್ಟೆ ಬಳಿಕ ಕಲ್ಮಾಡಿ ಮೂರನೇ ಪುಣ್ಯಕ್ಷೇತ್ರವಾಗಿ ಘೋಷಿಸಲ್ಪಡುವುದು ಸಂತೋಷದ ವಿಷಯವೆಂದರು. ಕಲ್ಮಾಡಿ ಚರ್ಚಿಗೆ ಅನೇಕ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪುಣ್ಯಕ್ಷೇತ್ರ ಘೋಷಣೆ ನಂತರ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆ ಕಾಣಲಿರುವುದು. ಆದಿವುಡುಪಿಯಿಂದ ಮಲ್ಪೆವರೆಗಿನ ರಸ್ತೆಯು ಶೀಘ್ರದಲ್ಲಿ ಚತುಷ್ಪಥವಾಗಿ ಮಾರ್ಪಾಡಾಗಲಿದ್ದು, ಮಲ್ಪೆ ಬೀಚಿಗೆ ಹಾಗೂ ಕಲ್ಮಾಡಿ ಚರ್ಚಿಗೆ ಭೇಟಿ ನೀಡಲಿರುವ ಯಾತ್ರಿಕರಿಗೆ ನೆರವಾಗಲಿರುವುದು.
ಈ ವೇಳೆ ಕಲ್ಮಾಡಿ ವಾರ್ಡಿನ ಕೌನ್ಸಿಲರ್ ಸುಂದರ ಕಲ್ಮಾಡಿ, ಚರ್ಚಿನ ಧರ್ಮಗುರುಗಳಾದ ವಂ.ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ವಂ.ರೋಯ್ ಲೋಬೊ, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಬಾ ಮೆಂಡೋನ್ಸಾ, 20 ಆಯೋಗಗಳ ಸಂಯೋಜಕಿ ಐಡಾ ಡಿಸೋಜಾ, ಸುವರ್ಣ ಮಹೋತ್ಸವದ ಶ್ರೀ ಸಂದೀಪ್ ಅಂದ್ರಾದೆ ಹಾಜರಿದ್ದರು.
ಕಲ್ಮಾಡಿಯಲ್ಲಿನ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮತ್ತು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಸುವರ್ಣ ಮಹೋತ್ಸವವು ಅಗಸ್ಟ್ 15, 2022 ರಂದು ನಡೆಯಲಿರುವುದು.











