ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಈ ದೇಶದ ವಿದ್ವಾಂಸಕ ಕೃತ್ಯಗಳಲ್ಲಿ ಭಾಗಿಯಾಗಿ ಭಯೋತ್ಪಾದನೆ, ದೇಶದ ಭದ್ರತೆ, ಅಂತರಿಕ ಸುರಕ್ಷತೆ ಹಿನ್ನಲೆಯಲ್ಲಿ PFI ಹಾಗೂ ಅದರ ಅಂಗಸಂಸ್ಥೆಗಳನ್ನು ದೇಶದಲ್ಲಿ 5 ವರ್ಷಗಳ ಅವಧಿಗೆ ನಿಷೇಧಿಸಿರುವುದಕ್ಕೆ ಬೈಂದೂರು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಬಿ.ವೈ. ರಾಘವೇಂದ್ರ, ರಾಷ್ಟ್ರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗುತ್ತಿದ್ದ ಈ ಸಂಘಟನೆಗಳನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. 2001 ಸೆಪ್ಟೆಂಬರ್ 27ರಂದು SIMI ಸಂಘಟನೆಯನ್ನು ಬ್ಯಾನ್ ಮಾಡಲಾಗಿತ್ತು, ಇಪ್ಪತ್ತು ವರ್ಷಗಳ ಬಳಿಕ ಅಂದರೆ 2022 ಸೆಪ್ಟೆಂಬರ್ 27ರಂದು ಬಹುದಿನಗಳ ಬೇಡಿಕೆಯಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ & ಪಿಎಫ್ಐ ಅಂಗ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಅಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIC), ನ್ಯಾಷನಲ್ ಕಾನ್ಫಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳ ಸಂಘಟನಗಳನ್ನು ಬ್ಯಾನ್ ಮಾಡಿರುವುದು ದೇಶದ ಸುರಕ್ಷಾ ದೃಷ್ಟಿಯಿಂದ ಅತ್ಯುತ್ತಮ ಕಾರ್ಯವಾಗಿದೆ ಎಂದಿದ್ದಾರೆ.
ನಿಖರ ಮಾಹಿತಿ ಮೇರೆಗೆ NIA ಸೇರಿದಂತೆ ವಿವಿಧ ರಾಜ್ಯಗಳ ಪೋಲಿಸ್ ಇಲಾಖೆ, ಇಲಾಖೆ ಗುಪ್ತಚರ ಮತ್ತು ಇತರ ತನಿಖಾ ತಂಡಗಳು ದೇಶದ 15 ರಾಜ್ಯಗಳಲ್ಲಿ ದಾಳಿ ನಡೆಸಿ ಅನೇಕ ಸಾಕ್ಷಿಗಳನ್ನು ಹಾಗೂ ದೊಡ್ಡ ಮಟ್ಟದ ಹಣವನ್ನು ಮತ್ತು ಸಂಘಟನೆಯ ಪ್ರಮುಖರನ್ನು ವಶಕ್ಕೆ ಪಡೆದುಕೊಂಡಿದ್ದು, ಈ ನೆಲದ ಕಾನೂನಿಗೆ ವಿರುದ್ಧವಾಗಿರುವ, ದೇಶ ವಿರೋಧಿ ಚಟುವಟಿಕೆ ನಡೆಸುವ ಯಾರನ್ನೂ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರಿಗೆ ಅಭಿನಂದನೆ ಸಲ್ಲಿಸಿದ್ದಾರೆ.











