ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟೇಶ್ವರದ ಐತಿಹಾಸಿಕ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಳ ವಾರ್ಷಿಕ ಬ್ರಹ್ಮರಥೋತ್ಸವ ಕೊಡಿಹಬ್ಬಕ್ಕಾಗಿ ಬ್ರಹ್ಮರಥವನ್ನು ಸಜ್ಜುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ಮೂಲಕ ಪ್ರಸಕ್ತ ಋತುವಿನ ರಥೋತ್ಸವಗಳ ಮೊದಲ ಹಬ್ಬದ ಕಾರ್ಯಕ್ರಮಗಳಿಗೆ ಚಾಲನೆ ದೊರೆತಂತಾಗಿದೆ.

ಗುರುವಾರ ಸಂಜೆ ಶ್ರೀ ಮೂಲೆ ಗಣಪತಿ, ಶ್ರೀ ಪಾರ್ವತಿ ಸಹಿತ ಶ್ರೀ ಕೋಟಿಲಿಂಗೇಶ್ವರ ಮತ್ತು ಪರಿವಾರ ದೇವರುಗಳ ಪ್ರಾರ್ಥನೆಯೊಂದಿಗೆ ರಥಾಲಯದಿಂದ ರಥವನ್ನು ಹೊರಗೆಳೆದು ತರುವ ಕಾರ್ಯ ನಡೆಸಲಾಯಿತು. ದೇವಳ ತಂತ್ರಿ ವೇದಮೂರ್ತಿ ಪ್ರಸನ್ನ ಕುಮಾರ್ ಐತಾಳರ ನಿರ್ದೇಶನ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಸದಸ್ಯ ಸುರೇಶ್ ಬೆಟ್ಟಿನ್ ರವರ ಉಸ್ತುವಾರಿಯಲ್ಲಿ ಸಾರ್ವಜನಿಕ ಭಕ್ತಾಭಿಮಾನಿಗಳು, ಕಾಲೇಜು ವಿದ್ಯಾರ್ಥಿಗಳು ರಥ ಹೊರಗೆಳೆಯುವಲ್ಲಿ ಕೈ ಜೋಡಿಸಿದರು.
ಈ ಪ್ರಾಚೀನ ಆರು ಚಕ್ರಗಳ ಬ್ರಹ್ಮರಥವನ್ನು ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪನಾಯಕ ನಿರ್ಮಿಸಿಕೊಟ್ಟಿದ್ದರು ಎನ್ನಲಾಗಿದೆ.
ಶಾಸ್ತ್ರೀಯವಾಗಿ ಈ ಆರು ಚಕ್ರಗಳ ಮಹಾ ರಥವನ್ನು “ಸ್ಯಂದನ ಮಹಾರಥ” ಎಂದು ಕರೆಯಲಾಗುವುದು. ವಿವಿಧ ಸುಂದರ ಕೆತ್ತನೆಗಳಿರುವ ಸ್ಥಿರರಥವು ನೆಲದಿಂದ 18 ಅಡಿ ಎತ್ತರವಿದೆ. ಇದನ್ನು ರಥದ ಗಡ್ಡೆ ಎನ್ನುವರು. ಈ ಸ್ಥಿರರಥ ಅಥವಾ ರಥದ ಗಡ್ಡೆಯನ್ನು ರಥಾಲಯದೊಳಗಿಂದ ಹೊರತಂದು ಹಬ್ಬಕ್ಕಾಗಿ ಸಜ್ಜುಗೊಳಿಸಲಾಗುವುದು.
ಕಳೆದ ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಸಿ, ವಿಶೇಷ ಬ್ರಹ್ಮರಥೋತ್ಸವವನ್ನು ನಡೆಸಲಾಗಿತ್ತು. ಆ ನಂತರ ರಥಾಲಯ ಸೇರಿದ ರಥದ ಗಡ್ಡೆ ಇದೀಗ ಹಬ್ಬಕ್ಕಾಗಿ ಹೊರಬಂದಿದೆ. ಸಣ್ಣಪುಟ್ಟ ರಿಪೇರಿಗಳಿದ್ದರೆ ಮಾಡಿ, ಬ್ರಹತ್ ಚಕ್ರಗಳನ್ನು ಸರಿಪಡಿಸಿದ ನಂತರ ಲೋಕೋಪಯೋಗಿ ಇಲಾಖೆ ರಥವನ್ನು ಪರೀಕ್ಷಿಸಿ ಫಿಟ್ನೆಸ್ ಸರ್ಟಿಫಿಕೇಟ್ ನೀಡುತ್ತದೆ. ನ. 25ರ ಶುಕ್ರವಾರ ಬೆಳಿಗ್ಗೆ 5.30ರ ನಸುಕಿನ ಶುಭ ಮುಹೂರ್ತದಲ್ಲಿ ತಂತ್ರಿ ಪ್ರಸನ್ನಕುಮಾರ ಐತಾಳ ಮತ್ತು ಅರ್ಚಕ ವೃಂದದವರು ರಥ ಮುಹೂರ್ತ ನೆರವೇರಿಸುವರು. ಆ ನಂತರ ದೇವರ ಭಕ್ತ ಸಮೂಹದ ದೇವಾಡಿಗ ವಂಶಸ್ಥರು ಪಾರಂಪರಿಕವಾಗಿ ರಥ ಕಟ್ಟುವ ಕಾರ್ಯ ನಡೆಸುತ್ತಾರೆ. ಮುಂಬರುವ ಡಿಸೆ0ಬರ್ 8 ರ ಗುರುವಾರ ಶ್ರೀ ಕೋಟಿಲಿಂಗೇಶ್ವರನ ಶ್ರೀಮನ್ಮಹಾರಥೋತ್ಸವ ನೆರವೇರಲಿದೆ.











