ರೈತ ದಿನಾಚರಣೆಗೆ ಸರ್ಕಾರ ಮನಸು ಮಾಡಬೇಕು – ಮಾಜೀ ಸಭಾಪತಿ ಪ್ರತಾಪಚಂದ್ರ ಶೆಟ್ಟಿ
ಕುಂದಾಪುರ ಮಿರರ್ ಸುದ್ದಿ…
ಉಪ್ಪುಂದ.; ಸರ್ಕಾರವು ರೈತರ ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳ ಕುರಿತು ಚರ್ಚಿಸುವ ಸಲುವಾಗಿ ರೈತರ ದಿನಾಚರಣೆ ನಡೆಸಲು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಚಿಂತನೆ ನಡೆಸಬೇಕಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ, ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಅವರು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ.ಉಪ್ಪುಂದ ಹಾಗೂ ರೈತ ಸಿರಿ, ರೈತ ಸೇವಾ ಒಕ್ಕೂಟ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಾಗೂರು ಶ್ರೀ ಕೃಷ್ಣಲಲಿತ ಕಲಾಮಂದಿರದಲ್ಲಿ ನಡೆದ ರೈತರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸುವ ಸರ್ಕಾರವು ರೈತರ ದಿನಾಚರಣೆ ಮಾಡದಿರುವುದು ವಿಷಾದನೀಯ. ರೈತರಿಗೆ ಪೂರಕವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿರುವ ಖಂಬದಕೋಣೆ ರೈತರ ಸೇ..ಸ.ಸಂಘದ ಆಡಳಿತ ಮಂಡಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಅನ್ನದಾತನ ಕುರಿತು ಜನಪ್ರತಿನಿಧಿಗಳು ಸರಕಾರ ಮಟ್ಟದಲ್ಲಿ ಚರ್ಚೆ ನಡೆಸದಿರುವುದು ದುರಂತ. ಪ್ರತಾಪಚಂದ್ರ ಶೆಟ್ಟಿ ಅವರು ಜನಪ್ರತಿನಿಧಿಯಾಗಿ ನಿವೃತ್ತಿ ಜೀವನದಲ್ಲೂ ರೈತರಿಗಾಗಿ ಚಿಂತನೆ ನಡೆಸಿ ಹೋರಾಟ ನಡೆಸುತ್ತಿರುವುದು ಇತಿಹಾಸವಾಗಲಿದೆ ಎಂದರು.
ಹಿರಿಯ ಪ್ರಗತಿಪರ ರೈತ ಹೆಗ್ಗೇರಿಹಿತ್ಲು ನಾರಾಯಣ ದೇವಾಡಿಗರಿಗೆ ಸಮ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ರೈತರಿಗೆ ಸಮ್ಮಾನ, 11 ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 2021-22ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಪುರೈಸಿದ ಸದಸ್ಯರಿಗೆ ಸಮ್ಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡು ಪ್ರಶಸ್ತಿ ಪಡೆದ ಸಾಧಕರಿಗೆ ರೈತಸಿರಿ ಗೌರವಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಕೃಷ್ಣಾರ್ಜುನ ಕಾಳಗ ಯಕ್ಷಗಾನ ನಡೆಯಿತು.
ಈ ಸಂದರ್ಭ ಕಿರಿಮಂಜೆಶ್ವರ ಗ್ರಾ.ಪಂ.ಅಧ್ಯಕ್ಷೆ ಗೀತಾ, ಸಂಘದ ಉಪಾಧ್ಯಕ್ಷ ಈಶ್ವರ ಹಕ್ಲತೋಡ್, ನಿರ್ದೇಶಕರಾದ ಬಿ.ಎಸ್.ಸುರೇಶ ಶೆಟ್ಟಿ, ಮೋಹನ ಪೂಜಾರಿ, ಭರತ ದೇವಾಡಿಗ, ನಾಗರಾಜ ಖಾರ್ವಿ, ಗುರುರಾಜ ಹೆಬ್ಬಾರ್, ಹೂವ ನಾಯ್ಕ, ದಿನೀತಾ ಶೆಟ್ಟಿ, ಜಲಜಾಕ್ಷಿ ಪೂಜಾರಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಪೈ.ಸ್ವಾಗತಿಸಿದರು. ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು. ಸಿಬ್ಬಂದಿ ನಾಗರತ್ನ ಮತ್ತು ಅರುಣ ಗಾಣಿಗ ಸಮ್ಮಾನಿತರ ಪರಿಚಯ ವಾಚಿಸಿದರು. ಹಿರಿಯ ಶಾಖಾ ವ್ಯವಸ್ಥಾಪಕ ಚಂದ್ರಯ್ಯ ಶೆಟ್ಟಿ ವಂದಿಸಿದರು.











