Category: ಸುದ್ದಿ

  • ಕಾಪು :ವೀರಪ್ಪ ಎಮ್ ಸಾಲ್ಯಾನ್ ಅವರ ಮನೆಗೆ ಸ್ವಾತಂತ್ರ್ಯಹೋರಾಟಗಾರರ ಮನೆ ನಾಮಫಲಕ ಅನಾವರಣ

    ಕಾಪು :ವೀರಪ್ಪ ಎಮ್ ಸಾಲ್ಯಾನ್ ಅವರ ಮನೆಗೆ ಸ್ವಾತಂತ್ರ್ಯಹೋರಾಟಗಾರರ ಮನೆ ನಾಮಫಲಕ ಅನಾವರಣ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೊಪ್ಪಲಂಗಡಿಯ ವೀರಪ್ಪ ಎಮ್ ಸಾಲ್ಯಾನ್ ಅವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮ ಫಲಕ ಅನಾವರಣ.

    ಸ್ವರಾಜ್ಯ ೭೫ ತಂಡದ 28ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾರ್ಯಕ್ರಮ ಜೊತೆಯಾದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕಾಳಾವಾರ ವರದರಾಜ್ ಎಮ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ಹಸ್ತ ಚಿತ್ರ ಫೌಂಡೇಶನ್ ರಿಂದ ವಕ್ವಾಡಿ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ಸರಸ್ವತಿ ಮಂದಿರ ಪ್ರೌಢಶಾಲೆ ಉಚ್ಚಿಲ, ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ, ಕಾಪು ಕ್ಷೇತ್ರ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ವಿವಿಧೋದ್ಧೇಶ ಸಹಕಾರಿ ಸಂಘ ನಿ. ಕಾಪು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಕಾರ್ಯಕ್ರಮ (“ಸ್ವರಾಜ್ಯ ೭೫ ತಂಡದೊಂದಿಗೆ) ಯಶಸ್ವಿಗೊಳಿಸಲಾಯಿತು.

    ಪ್ರಾಂಶುಪಾಲರು ಡಾ.ಭಾಸ್ಕರ್ ಶೆಟ್ಟಿ ಸಳ್ವಾಡಿ ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚೆನೆಗೈಯುವ ಮೂಲಕ ಚಾಲನೆ ನೀಡಿದರು. ಮಾಧವ್ ಪಾಲನ್ ಕಾಪು ಶುಭ ಹಾರೈಸಿದರು.

    ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆಯ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ನಾಮಫಲಕ ಅನಾವರಣ ಮಾಡಿದರು.

    ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯ ರ ಕೊಡುಗೆಯೊಂದಿಗೆ ವಿಚಾರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ರಾಮದಾಸ್ ಪ್ರಭು ವಿಚಾರ ಹಂಚಿಕೊಂಡರು. ಕೊಪ್ಪಲಂಗಡಿ ವೀರಪ್ಪ ಎಮ್ ಸಾಲ್ಯಾನ್ ಇವರ ವಿಚಾರವನ್ನು ಅನನ್ಯ ಹಂಚಿಕೊಂಡರು.

    ಗಣ್ಯರಾಗಿ ಪುಂಡಲೀಕ ಮರಾಠೆ , ಬಾಬುರಾಯ್ ಆಚಾರ್ಯ, ಸುಲೋಚನ ಎಸ್.ಪಾಲನ್ , ಪ್ರಭಾವತಿ ಪಿ.ಸಾಲ್ಯಾನ್ , ವಿಚಾರ ಹಂಚಿಕೊಂಡರು

    ಕಾರ್ಯಕ್ರಮದಲ ಅಧ್ಯಕ್ಷತೆಯನ್ನು ಕಾಪು ಕ್ಷೇತ್ರ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ವಿವಿಧೋದ್ಧೇಶ ಸಹಕಾರಿ ಸಂಘ ನಿ ಕಾಪು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಾವಿತ್ರಿ ಗಣೇಶ್ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಸಂತೋಷ್ ಎಸ್.ನಾಯಕ್ ,ಪ್ರಮೋದ್ ಶಂಕರನಾರಾಯಣ, ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿದ್ಯಾರ್ಥಿ ಕುಟುಂಬಸ್ಥರು ಉಪಸ್ಥಿತರಿದ್ದರು.

    ಪ್ರಾಸ್ತಾವಿಕ ವಿಚಾರವನ್ನು ಕಾರ್ಯಕ್ರಮದ ಸಂಚಾಲಕರು ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು. ನಿರೂಪಣೆಯನ್ನು ದಿವ್ಯಾ ಸ್ವಾಗತ ಕಾರ್ತಿಕ್ ಹಾಗೂ ಅಂಜನಾ ಕಾಮತ್ ವಂದಿಸಿದರು.

  • ಗಂಗೊಳ್ಳಿ:ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ ಹೆಚ್ಚಳಕ್ಕಾಗಿ ಪ್ರತಿಭಟನೆ

    ಗಂಗೊಳ್ಳಿ:ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ ಹೆಚ್ಚಳಕ್ಕಾಗಿ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ:ಡಿ.18; ಕಟ್ಟಡ ಕಲ್ಯಾಣ ಮಂಡಳಿ ಗಂಭೀರ ಕಾಯಿಲೆಗೊಳಗಾದ ಕಟ್ಟಡ ಕಾರ್ಮಿಕರಿಗೆ ಅತೀ ಕಡಿಮೆ ವೈದ್ಯಕೀಯ ವೆಚ್ಚ ನೀಡುತ್ತಿದೆ ಆದರೆ ಖಾಸಗಿ ಆಸ್ಪತ್ರೆಗಳಿಗೆ ತಪಾಸಣೆ ಮಾಡಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ ಇದು ಕಾರ್ಮಿಕರಿಗೆ ಮಾಡುವ ಅನ್ಯಾಯ ಈ ತಪಾಸಣೆ ಎಲ್ಲಾ ನೈಜ ಕಾರ್ಮಿಕರು ಬಹಿಷ್ಕರಿಸಬೇಕು ಮಂಡಳಿ ಈ ತೀರ್ಮಾನ ವಾಪಾಸ್ಸು ಪಡೆದು ಈಗಿರುವ ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಬೇಕು ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಅವರು ಹೇಳಿದರು.

    ಅವರು ಗಂಗೊಳ್ಳಿ ಗ್ರಾಮ ಪಂಚಾಯಿತಿ ಎದುರುಗಡೆ ಸೋಮವಾರ ನಡೆಸಿದ ಕಟ್ಟಡ ಕಾರ್ಮಿಕರ ಪ್ರತಿಭಟನಾ ಸಭೆಯಲ್ಲಿ ಹೇಳಿದರು.

    ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಮಾತನಾಡಿ;ಕಟ್ಟಡ ಕಾರ್ಮಿಕರು ಕೆಲಸ ಸಮಯದಲ್ಲಿ ಅಪಘಾತಗಳಲ್ಲಿ ಮೂಳೆ ಮುರಿತವಾದರೆ ಇನ್ನೀತರ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ಜು ಒಳರೋಗಿಯಾಗಿ ದಾಖಲಾಗದಿದ್ದರೂ ಮಂಡಳಿಯು ಚಿಕೆತ್ಸೆ ವೆಚ್ಚ ಭರಿಸಬೇಕು ಅನಗತ್ಯವಾಗಿ ಖರ್ಚು ಮಾಡುತ್ತಿರುವ ಆರೋಗ್ಯ ತಪಾಸಣೆ ನಮ್ಮ ಕಟ್ಟಡ ಕಾರ್ಮಿಕರು ಬಹಿಷ್ಕರಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಮಿಕರ ತಪಾಸಣೆ ಮಾಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

    ಗಂಗೊಳ್ಳಿ ಘಟಕದ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

    ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಬೇಕು, ತಿರಸ್ಕ್ರತವಾದ ಪಿಂಚಣಿ ಪುರಸ್ಕರಿಸಬೇಕು, ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಕೂಡಲೇ ಕ್ರಮ ವಹಿಸಬೇಕು ಎಂಬ ಮನವಿಯನ್ನು ರಾಜ್ಯ ಸರ್ಕಾರದ ಕಾರ್ಮಿಕ ಮಂತ್ರಿಗೆ ಪಂಚಾಯತ್ ಮೂಲಕ ಮನವಿ ನೀಡಲಾಯಿತು.

    ಘಟಕದ ಕೋಶಾಧಿಕಾರಿ ಅಭಿನಂದನ್ ಅವರು ವಂದಿಸಿದರು.

  • ಕುಂದಾಪುರ :ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ ಕಾಳಾವರದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ

    ಕುಂದಾಪುರ :ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ ಕಾಳಾವರದಲ್ಲಿ ಸಂಭ್ರಮದ ಷಷ್ಠಿ ಮಹೋತ್ಸವ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನ ಕಾಳಾವರ ಇಲ್ಲಿ ಚಂಪಷಷ್ಠಿ (ಹಿರಿಷಷ್ಠಿ) ಮಹೋತ್ಸವ ಡಿ.18 ರಂದು ನಡೆಯಿತು.
    ತಂತ್ರಿಗಳಾದ ಕೋಟ ಶ್ರೀ ಕೃಷ್ಣ ಸೋಮಯಾಜಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಡಿ.18 ರಂದು ಉದಯ ಗಂಟೆ 4.30ರಿಂದ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ,  ಉದಯ ಗಂಟೆ 5ರಿಂದ ಹಣ್ಣುಕಾಯಿ, ಹೂವುಕಾಯಿ, ಕಲಶ ಸಮರ್ಪಣೆ, ಕರ್ಪೂರ ಆರತಿ, ದೇವರ ದರ್ಶನ, ತೀರ್ಥಪ್ರಸಾದ ವಿತರಣೆ, ಪೂರ್ವಾಹ್ನ  7 ಗಂಟೆಯಿಂದ ಋತ್ವಿಜರಿಂದ ವೇದ ಪಾರಾಯಣ, ಬಳಿಕ ಮಡೆ ಪ್ರದಕ್ಷಿಣೆ, ಮಧ್ಯಾಹ್ನ 12 ಗಂಟೆಗೆ ಕಲಸಾಭಿಷೇಕ, ಮಹಾಮಂಗಳಾರತಿ, ಸಂದರ್ಶನ, ಕ್ಷೇತ್ರ ಪ್ರದಕ್ಷಿಣೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 7ಗಂಟೆಯಿಂದ ನಮ್ಮಶಕ್ತಿ ಮಹಿಳಾ ಭಜನಾಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಷಷ್ಠಿ ಬಳಗ ಕಾಳಾವರ ಇವರಿಂದ ಮನೋರಂಜನಾ ಕಾರ್ಯಕ್ರಮ ಹಾಗೂ  ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ನಡೆಯಲಿದೆ.
     ಡಿ.19ರಂದು  ಬೆಳಿಗ್ಗೆ 6.30ಕ್ಕೆ ಹಾಲು ಹಿಟ್ಟಿನ ಸೇವೆ, ಬೆಳಿಗ್ಗೆ 9 ಗಂಟೆಗೆ ನಾಗಮಂಡಲೋತ್ಸವ, ಕಟ್ಟುಕಟ್ಟಳೆ ಸೇವೆ, ತುಲಾಭಾರ, ಶ್ರೀ ಕ್ಷೇತ್ರ ಪ್ರದಕ್ಷಿಣೆ, ಶ್ರೀ ಕ್ಷೇತ್ರಪಾಲನಿಗೆ ಪೂಜೆ, ಶ್ರೀ ಭೂತರಾಯ ಸ್ವಾಮಿಗೆ ತೆಂಗಿನಕಾಯಿ ಸೇವೆ, ಸಂದರ್ಶನ, ರಾತ್ರಿ 7ರಿಂದ 12ರ ತನಕ  ಹಾಲಾಡಿ ಮೇಳದವರಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
    ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎಸ್.ಚಂದ್ರಶೇಖರ ಹೆಗ್ಡೆ, ಹಾಗೂ ಸಮಿತಿ ಸದಸ್ಯರಾದ ಸತ್ಯನಾರಾಯಣ ಪುರಾಣಿಕ (ಅರ್ಚಕರು), ಭರತ್ ಕುಮಾರ್ ಶೆಟ್ಟಿ ಕಾಳಾವರ, ಮಹೇಶ ಕಾಳಾವರ, ಚಂದ್ರ ಪೂಜಾರಿ ಅಸೋಡು, ಶ್ರೀಮತಿ ಶ್ರೀಲತಾ ಎಸ್ ಕಾಳಾವರ, ಕೆ.ರಂಜಿತ್ ಕುಮಾರ್ ಶೆಟ್ಟಿ ಸಳ್ವಾಡಿ, ಶ್ರೀಮತಿ ಲಲಿತಾ ಸಳ್ವಾಡಿ, ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
    ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಬಂಧಿ, ಸಂತಾನ ಸಂಬಂದಿ, ಚರ್ಮಾದಿ ರೋಗರುಜಿನಗಳ ಸಂದರ್ಭದಲ್ಲಿ  ಹೇಳಿಕೊಂಡ ಹರಕೆಯನ್ನು ಷಷ್ಠಿಯ ದಿನ ಸಮರ್ಪಿಸುತ್ತಾರೆ. ಹರಕೆ ಹಾಕುವುದು ಇಲ್ಲಿ ವಿಶೇಷವಾಗಿದೆ. ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕೃತಿಗಳನ್ನು ದೇವರಿಗೆ ಸಮರ್ಪಿಸುವ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ದಿನದಂದು ಕ್ಷೇತ್ರದಲ್ಲಿ ಅನೇಕ ಮಂದಿ ಬೆಳ್ಳಿ ತುಣುಕುಗಳನ್ನು  ಮಾರುವ ಸಂಪ್ರದಾಯವಿದೆ. ನಾಗ(ಸುಬ್ರಮಣ್ಯನಿಗೆ) ಶೃಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಹೂವುಗಳನ್ನು ಸಮರ್ಪಿಸುತ್ತಾರೆ. ಈ ಹರಕೆ, ಬಾಳೆಹಣ್ಣು ಮೊದಲಾದವುಗಳನ್ನು ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು. ಷಷ್ಠಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಢಿಯೂ ಈ ಭಾಗದಲ್ಲಿದೆ. ಹಣ್ಣು ಕಾಯಿ, ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ದೇವಸ್ಥಾನದಿಂದ ಕೆರೆಯ ಸಮೀಪದಿಂದಲೇ ಸರದಿ ಆರಂಭವಾಗಿತ್ತು.  ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಗೊಂಡರು.
  • ಕುಂದಾಪುರದಲ್ಲಿ ಸೌಹಾರ್ದ ಕ್ರಿಸ್ಮಸ್ ಸಂಭ್ರಮ

    ಕುಂದಾಪುರದಲ್ಲಿ ಸೌಹಾರ್ದ ಕ್ರಿಸ್ಮಸ್ ಸಂಭ್ರಮ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ: ಸಾಮಾನ್ಯ ವ್ಯಕ್ತಿಯಾಗಿ ಬದುಕುವ ಮೂಲಕ ಸರಳ ವ್ಯಕ್ತಿತ್ವ ಹೊಂದಿದ ಯೇಸು ಕ್ರಿಸ್ತರು ಪರಸ್ಪರ ಸೌಹಾರ್ದತೆ ಸಾರಿದವರು ಎಂದು ಕುಂದಾಪುರ ಹೋಲಿ ರೋಜರಿ ಚರ್ಚಿನ ಧರ್ಮಗುರು ಫಾದರ್ ಸ್ಟ್ಯಾನಿ ತಾವ್ರೋ ಹೆಳಿದರು.

    ಅವರು ಭಾನುವಾರ ಹೋಲಿ ರೋಜರಿ ಶಾಲಾ ಮೈದಾನದಲ್ಲಿ ಕೆಥೋಲಿಕ್ ಸಭಾ ಉಡುಪಿ ಪ್ರದೇಶ್(ರಿ.), ಕಥೋಲಿಕ ಸಭಾ ವಲಯ ಸಮಿತಿ – ಶೆವೊಟ್ ಪ್ರತಿಷ್ಠಾನ(ರಿ.) ಕುಂದಾಪುರ, ಹೋಲಿ ರೋಜರಿ ಚರ್ಚ್, ಕುಂದಾಪುರ ಘಟಕದ ಆಶ್ರಯದಲ್ಲಿ ನಡೆದ ಸೌಹಾರ್ದ ಕ್ರಿಸ್ಮಸ್ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಡಿಸೆಂಬರ್ 25ರಂದು ನಾವು ಕ್ರಿಸ್ಮಸ್ ಹಬ್ಬ ಆಚರಣೆ ನಡೆಯುತ್ತದೆ. ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿದ ಯೇಸು ಕ್ರಿಸ್ತರ ಸೌಹಾರ್ದತೆ ಹಾಗೂ ಸಹಬಾಳ್ವೆ ಯನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಸೌಹಾರ್ದ ಕ್ರಿಸ್ಮಸ್ ಹಮ್ಮಿಕೊಂಡಿರುವುದು ಸಂತೋಷದ ವಿಚಾರ ಎಂದರು. ಜಗತ್ತಿನೆಲ್ಲೆಡೆ ಶಾಂತಿ ಸೌಹಾರ್ದತೆ ನೆಲೆಸಲಿ ಎಂದು ಶುಭ ಹಾರೈಸಿದರು.

    ಸೌಹಾರ್ದ ಕ್ರಿಸ್ಮಸ್ ಸಂಭ್ರಮದ ಸಂದೇಶವನ್ನು ಉಪನ್ಯಾಸಕ ಸುಜೇಂದ್ರ ಹಂದೆ ಮಾತನಾಡಿ, ಈ ಜಗತ್ತಿನ ಒಳಿತಿಗಾಗಿ ಶ್ರಮಿಸಿದವರನ್ನು ನೆನಪಿಸಿಕೊಳ್ಳದೇ ಹೋದರೆ ಮತ್ತು ಅವರು ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸದೇ ಇದ್ದರೆ ನಮ್ಮ ಬದುಕು ಅಪೂರ್ಣವಾಗುತ್ತದೆ ಎಂದರು.

    ಈ ಸಂದರ್ಭದಲ್ಲಿ ಚೈತನ್ಯ ಸ್ಷೇಷಲ್ ಸ್ಕೂಲ್ ಮುಖ್ಯೋಪಾಧ್ಯಾಯನಿ ಬಿ. ಲೀಲಾವತಿ ಕಾರ್ಕಡ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಕಲ್ಪನಾ ಪ್ರಭಾಕರ ಇವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಕಥೋಲಿಕ ಸಭೆಯ ವಲಯ ಅಧ್ಯಕ್ಷ ವಿಲ್ಸನ್ ಡಿ’ಆಲ್ಮೇಡಾ ವಹಿಸಿದ್ದರು. ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮದ ಸಂಚಾಲಕ ಜೊನ್ಸನ್ ಡಿ’ಆಲ್ಮೇಡಾ, ಕುಂದಾಪುರ ಕಥೋಲಿಕ ಸಭೆ ವಲಯ ಕಾರ್ಯದರ್ಶಿ ಗ್ರೇವಿನ್ ಪಸನ್ನ್, ನಿಕಟ ಪೂರ್ವ ಅಧ್ಯಕ್ಷೆ ಶಾಂತಿ ಪಿರೇರಾ, ಕುಂದಾಪುರ ಶೆವೊಟ್ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಉಪಸ್ಥಿತರಿದ್ದರು.

    ಡಾ.ಸೋನಿ ಡಿ’ಕೋಸ್ತಾ ಕಾರ್ಯಕ್ರಮ ನಿರೂಪಿಸಿದರು, ಕುಂದಾಪುರ ಘಟಕದ ಅಧ್ಯಕ್ಷೆ ಶೈಲಾ ಆಲ್ಮೇಡಾ ಸ್ವಾಗತಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

  • ಕುಂದಾಪುರ :ಕಲಿತ ಕೆರಾಡಿ ಕನ್ನಡ ಶಾಲೆ ದತ್ತು ಪಡೆದ ನಟ ರಿಷಬ್ ಶೆಟ್ಟಿ

    ಕುಂದಾಪುರ :ಕಲಿತ ಕೆರಾಡಿ ಕನ್ನಡ ಶಾಲೆ ದತ್ತು ಪಡೆದ ನಟ ರಿಷಬ್ ಶೆಟ್ಟಿ

    ರಿಷಬ್ ಫೌಂಡೇಶನ್‌ನಿಂದ ಕನ್ನಡ ಶಾಲೆಗಳ ಉಳಿಸಿ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ತಾನು ಪ್ರಾಥಮಿಕ ಶಿಕ್ಷಣವನ್ನು ಕಲಿತ ಕೆರಾಡಿಯ ಸರಕಾರಿ ಹಿ.ಪ್ರಾ. ಕನ್ನಡ ಮಾಧ್ಯಮ ಶಾಲೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮುಂದಿನ ಐದು ವರ್ಷಗಳ ಅವಧಿಗೆ ದತ್ತು ಪಡೆದಿದ್ದಾರೆ. ಸರಕಾರಿ ಹಿ.ಪ್ರಾ. ಶಾಲೆಯ ಕಾಸರಗೋಡು ಚಿತ್ರ ಮಾಡಿದಾಗಿನಿಂದಲೂ ಕನ್ನಡ ಶಾಲೆಗಳ ಉಳಿಸಿ, ಬೆಳೆಸಿ ಅಭಿಯಾನ ಕೈಗೊಂಡಿರುವ ಅವರು ಈಗ ತನ್ನ ಹುಟ್ಟೂರಿನ ಶಾಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಹೆಜ್ಜೆಯಿರಿಸಿದ್ದಾರೆ.

    ಕೆರಾಡಿಯ ಈ ಶಾಲೆಯನ್ನು ದತ್ತು ಪಡೆಯುವ ಮೂಲಕ ಶಾಲೆಯ ಸಂಪೂರ್ಣ ಅಭಿವೃದ್ಧಿ ಜವಾಬ್ದಾರಿಯನ್ನು ರಿಷಬ್ ಫೌಂಡೇಶನ್‌ನಿಂದ ಮಾಡುವ ಯೋಜನೆಯನ್ನು ಅವರು ಹೊಂದಿದ್ದಾರೆ. ಇದರೊಂದಿಗೆ ಈ ಫೌಂಡೇಶನ್ ಮೂಲಕ ಕನ್ನಡ ಶಾಲೆ ಉಳಿಸಿ ಅಭಿಯಾನವನ್ನು ಸಹ ಅವರು ಕೈಗೊಂಡಿದ್ದಾರೆ.

    ಕಾಂತಾರ ಪ್ರೀಕ್ವೆಲ್ ಚಿತ್ರದ ಚಿತ್ರೀಕರಣದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಸದ್ಯ ಹುಟ್ಟೂರಾದ ಕೆರಾಡಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ರವಿವಾರ ತಾನು ಕಲಿತ ಶಾಲೆಗೆ ಭೇಟಿ ನೀಡಿದರು. ಶಾಲೆ ದತ್ತು ಪಡೆಯುವ ಬಗ್ಗೆ ಪೂರ್ವ ಭಾವಿ ಚರ್ಚೆ ನಡೆಸಿದ್ದಲ್ಲದೆ, ಅಲ್ಲಿನ ಮಕ್ಕಳು, ಶಿಕ್ಷಕರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ತಾನು ಕಲಿತ ಶಾಲೆಯನ್ನು ದತ್ತು ಪಡೆಯುವುದಾಗಿ ಘೋಷಿಸಿದರು.

    ಕೈರಂಗಳ ಶಾಲೆ ಅಭಿವೃದ್ಧಿ
    ಸರಕಾರಿ ಹಿ.ಪ್ರಾ. ಶಾಲೆಯ ಕಾಸರಗೋಡು ಚಿತ್ರದ ಚಿತ್ರೀಕರಣಕ್ಕಾಗಿ ಬಂಟ್ವಾಳ ತಾಲೂಕಿನ ಕೈರಂಗಳ ಸರಕಾರಿ ಹಿ.ಪ್ರಾ. ಶಾಲೆಯನ್ನು ಬಳಸಿದ್ದರು. ಈ ಚಿತ್ರದಲ್ಲಿ ಗಡಿನಾಡ ಕನ್ನಡ ಶಾಲೆಗಳ ದುಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದರು. ಆಗ ೪೨ ಮಕ್ಕಳಿದ್ದು, ಆ ಬಳಿಕ ಮಕ್ಕಳ ಸಂಖ್ಯೆ ೧೭ ಕ್ಕೆ ಕುಸಿದು, ಮುಚ್ಚುವ ಹಂತದಲ್ಲಿತ್ತು ಈ ಶಾಲೆ. ಆದರೆ ತನ್ನ ಸಿನೆಮಾಕ್ಕಾಗಿ ಬಳಸಿ, ಕೈ ಕಟ್ಟಿ ಕುಳಿತುಕೊಳ್ಳದೇ, ಈ ಕೈರಂಗಳ ಶಾಲೆಯನ್ನು ದತ್ತು ಪಡೆದು, ಮಾದರಿ ಶಾಲೆಯಾಗಿ ರೂಪಿಸುವ ಪಣ ತೊಟ್ಟಿದ್ದರು. ಅದರಂತೆ ಶಾಲೆಗೆ ಹೊಸ ರೂಪ ನೀಡಿ, ಮಕ್ಕಳ ಸಂಖ್ಯೆಯನ್ನು ವರ್ಷದೊಳಗೆ ೮೪ ಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ತಾನು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ.

    ಸರ್ವಾಂಗೀಣ ಅಭಿವೃದ್ಧಿ
    ಈ ಶಾಲೆಯಲ್ಲಿ ೭೧ ಮಂದಿ ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿದ್ದು, ಒಬ್ಬರು ಖಾಯಂ ಶಿಕ್ಷಕರಿದ್ದಾರೆ. ಉಳಿದವರು ಗೌರವ ಶಿಕ್ಷಕರಾಗಿದ್ದಾರೆ. ನಾನು ಸ್ವತಃ ಈ ಶಾಲೆಯ ಸ್ಥಿತಿಗತಿಯನ್ನು ತಿಳಿದುಕೊಂಡಿದ್ದು, ರಿಷಬ್ ಫೌಂಡೇಶನ್ ಮುಂದಿನ ಶೈಕ್ಷಣಿಕ ವರ್ಷದಿಂದ ೫ ವರ್ಷಗಳ ಅವಧಿಗೆ ಈ ಶಾಲೆಯನ್ನು ದತ್ತು ಪಡೆದಿದೆ. ಮೂಲಭೂತ ಸೌಕರ್ಯ ಸಹಿತ ಕೊಠಡಿ, ಪ್ರತೀ ತರಗತಿಗೆ ಶಿಕ್ಷಕರು, ಆವರಣ ಗೋಡೆ, ಅಗತ್ಯವಿದ್ದರೆ ವಾಹನದ ವ್ಯವಸ್ಥೆ ಕಲ್ಪಿಸಲಿದೆ. ಇದಲ್ಲದೆ ಎಲ್‌ಕೆಜಿ – ಯುಕೆಜಿ, ಸ್ಪೋಕನ್ ಇಂಗ್ಲಿಷ್ ಕಲಿಕೆ ಆರಂಭಿಸುವ ಯೋಜನೆಯಿದೆ ಎನ್ನುವುದಾಗಿ ರಿಷಬ್ ಶೆಟ್ಟಿ ಇದೇ ವೇಳೆ ತಿಳಿಸಿದ್ದಾರೆ.

    ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಮಾತನಾಡಿ, ಕನ್ನಡ ಮಾತ್ರವಲ್ಲದೆ ದೇಶದ ಚಲನಚಿತ್ರ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ರಿಷಬ್ ಶೆಟ್ಟಿ ಅವರು ಕನ್ನಡ ಶಾಲೆಗಳ ಮೇಲೆತ್ತುವಿಕೆ ನಿಟ್ಟಿನಲ್ಲಿ ತಾನು ಕಲಿತ ಶಾಲೆಯನ್ನು ದತ್ತು ಪಡೆದಿರುವುದು ನಿಜಕ್ಕೂ ಮಾದರಿ ಕಾರ್ಯ. ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

    ಈ ಸಂದರ್ಭದಲ್ಲಿ ಕೆರಾಡಿ ಗ್ರಾ.ಪಂ. ಅಧ್ಯಕ್ಷ ಸುದರ್ಶನ ಶೆಟ್ಟಿ, ಉಪಾಧ್ಯಕ್ಷೆ ಕುಸುಮಾ ಪೂಜಾರಿ, ವರಸಿದ್ಧಿ ವಿನಾಯಕ ಪ.ಪೂ. ಕಾಲೇಜಿನ ನಿರ್ದೇಶಕ ಪ್ರದೀಪ್ ಶೆಟ್ಟಿ, ವಕೀಲ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಸಿ.ಎ. ಬ್ಯಾಂಕ್ ನಿರ್ದೇಶಕ ಭುಜಂಗ ಶೆಟ್ಟಿ, ಉದ್ಯಮಿ ಬಿ.ಎಸ್. ಸುರೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

    ಎಸ್‌ಡಿಎಂಸಿ ಅ‘ಕ್ಷ ಸತೀಶ್ ಕೊಠಾರಿ ಸ್ವಾಗತಿಸಿ, ಶಾಲೆಯ ಮುಖ್ಯ ಶಿಕ್ಷಕ ವಿಜಯ ಶೆಟ್ಟಿ ನಿರೂಪಿಸಿದರು.

    ಕನ್ನಡ ಶಾಲೆ ಉಳಿಸುವ ಉದ್ದೇಶ
    ಕನ್ನಡ ಶಾಲೆಗಳು ಮುಚ್ಚುತ್ತಿವೆ ಎನ್ನುವುದನ್ನು ಮನಗಂಡು ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರ ಮಾಡಿದೆ. ಅದರ ಮುಂದುವರಿದ ಭಾಗವಾಗಿ ಈ ಕೈಂಕರ್ಯವನ್ನು ನಮ್ಮಿಂದ ಕೈಗೊಂಡಿದ್ದೇವೆ. ಕನ್ನಡ ಶಾಲೆಗಳ ಉನ್ನತೀಕರಣ ರಿಷಬ್ ಫೌಂಡೇಶನ್‌ನ ಉದ್ದೇಶ. ಅದರ ಮೊದಲ ಹಂತವಾಗಿ ನನ್ನ ಹುಟ್ಟೂರಿನ ಶಾಲೆಯನ್ನು ೫ ವರ್ಷಗಳ ಅವಽಗೆ ದತ್ತು ಪಡೆದಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಮುಚ್ಚುವ ಹಂತದಲ್ಲಿರುವ, ಹಿಂದುಳಿದಿರುವ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ ಯೋಜನೆ ಈ ಫೌಂಡೇಶನ್‌ನದ್ದಾಗಿದೆ – ರಿಷಬ್ ಶೆಟ್ಟಿ, ನಟ, ನಿರ್ದೇಶಕ

  • ಬಾರಕೂರು :ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ: ವಾರ್ಷಿಕ ಜಾತ್ರಾ ಮಹೋತ್ಸವ

    ಬಾರಕೂರು :ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ: ವಾರ್ಷಿಕ ಜಾತ್ರಾ ಮಹೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಬ್ರಹ್ಮಾವರ: ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು- ಬಾರಕೂರು ಇಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಡಿಸೆಂಬರ್ 16ರಿಂದ ಡಿಸೆಂಬರ್ 20ರ ತನಕ ನಡೆಯಿತು.

    ಡಿಸೆಂಬರ್ 16 ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಪುಣ್ಯಾಹ ದೇವನಾಂದಿ, ಅಗ್ನಿಜನನ, 108 ಕಾಯಿ ಗಣಹೋಮ, ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ ಗಂಟೆ 12ಕ್ಕೆ ಪೂರ್ಣಾಹುತಿ, ರಾತ್ರಿ ಗಂಟೆ 7ಕ್ಕೆ ಗುರುಮಠದ ಮೂಲ ಮನೆಯಲ್ಲಿ ತುಳಸಿ ಪೂಜೆ, ರಾತ್ರಿ 10ಕ್ಕೆ ಕೆಂಡಸೇವೆ, 11.30ಕ್ಕೆ ರಂಗಪೂಜೆ, ತುಳಸಿ ಪೂಜೆ ನಡೆಯಿತು,

    ಡಿ.16ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ತನಕ ಶ್ರೀ ಕುಲಮಹಾಸ್ತ್ರೀ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ 2 ಗಂಟೆಯಿಂದ ಬೆಳಿಗ್ಗೆ 4 ಗಂಟೆಯ ತನಕ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಪ್ರಾತಃಕಾಲ 4 ಗಂಟೆಯಿಂದ 6 ಗಂಟೆಯ ತನಕ ಶ್ರೀ ವಿನಾಯಕ ಭಜನಾ ಮಂಡಳಿ ನಾಗರಮಠ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

    ಡಿಸೆಂಬರ್ 17 ಆದಿತ್ಯವಾರ ಪೂರ್ವಾಹ್ನ 9ಕ್ಕೆ ಮಹಾಮಂಗಳಾರತಿ, 10ಗಂಟೆಗೆ ಪರಿವಾರ ದೇವರುಗಳ ನೃತ್ಯ ಸೇವೆ, 12ಗಂಟೆಗೆ ತುಲಾಭಾರಾದಿ ಹರಕೆಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಅಪರಾಹ್ನ 3 ಗಂಟೆಗೆ ಮಹಾಮಂಗಳಾರತಿ, ಮಹಾಬಲಿ ಪೂಜೆ, ಸಂಜೆ ಗಂಟೆ 5ಕ್ಕೆ ಸೆಡಿ ಪೂಜೆ, ಬೆಳಗಿನ ಜಾವ 5 ಗಂಟೆಗೆ ತೆಪ್ಪೋತ್ಸವ, ಕಟ್ಟೆಪೂಜೆ ನಡೆಯಿತು.

    ಡಿಸೆಂಬರ್ 17ರಂದು ಸಂಜೆ 6ಕ್ಕೆ ಮೊಗವೀರ ಯುವಕ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ ಸಾಂಸ್ಕೃತಿಕ ವೈವಿಧ್ಯ. ಡಿ.18 ಸಂಜೆ 6ಕ್ಕೆ ಮೊಗವೀರ ಮಹಿಳಾ ಸಂಘ ಬೆಣ್ಣೆಕುದ್ರು ಬಾರ್ಕೂರು ಇವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

    ಡಿ.18ರಂದು ಸೋಮವಾರ ಪೂರ್ವಾಹ್ನ 9 ಗಂಟೆಗೆ ಮಹಾಮಂಗಳಾರತಿ, 10 ಗಂಟೆಗೆ ಪರಿವಾರ ದೇವರುಗಳ ನೃತ್ಯಸೇವೆ, ಗುರು ಪೀಠದಲ್ಲಿ ದೀಪಾರಾಧನೆ, 12ಗಂಟೆಗೆ ತುಲಾಭಾರಾದಿ ಹರಕೆಗಳು, ಅಪರಾಹ್ನ ಗಂಟೆ 3ಕ್ಕೆ ಮುಳ್ಳುಹಾವಿಗೆ ಪಾದುಕೆ ಪೂಜೆ, ಬೆನಗಲ್ಲು ಪೂಜೆ, ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ ನಡೆಯಲಿದೆ.

    ಡಿಸೆಂಬರ್ 19 ಮಂಗಳವಾರ ಪೂರ್ವಾಹ್ನ 11ಗಂಟೆಗೆ ನಾಗದೇವರ ದರ್ಶನ, 12 ಗಂಟೆಗೆ ಮಹಾಪೂಜೆ, ಹಸಲ ದೈವ ಮತ್ತು ಕೋಳಿಯಾರ ದೈವದ ಪೂಜೆ, ರಾತ್ರಿ 9 ಗಂಟೆಗೆ ಶ್ರೀ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ ಪ್ರಾರಂಭವಾಗಲಿದೆ.

    ಡಿಸೆಂಬರ್ 20 ಬುಧವಾರ ಪ್ರಾತಃಕಾಲ 6 ಗಂಟೆಗೆ ಮಲೆಸಾವಿರ ದೈವದರ್ಶನ, ಗಂಟೆ 8ಕ್ಕೆ ಹಾಲಾವಳಿ ನಡೆಯಲಿದೆ.

    ಡಾ.ಜಿ.ಶಂಕರ್, ಉದ್ಯಮಿ ಆನಂದ ಸಿ.ಕುಂದರ್ , ಉಡುಪಿ ಶಾಸಕ ಯಶಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

  • ಕೋಟ : ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ: ಹಿರಿಯ ಪತ್ರಿಕಾ ಸಂಪಾದಕ ವಿಶ್ವೇಶ್ವರ ಭಟ್ ನೀಡಿ ಗೌರವ

    ಕೋಟ : ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ: ಹಿರಿಯ ಪತ್ರಿಕಾ ಸಂಪಾದಕ ವಿಶ್ವೇಶ್ವರ ಭಟ್ ನೀಡಿ ಗೌರವ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಪತ್ರಿಕೆಗಳು ವಾಸ್ತವಾಂಶಗಳಿಗೆ ಒತ್ತು ನೀಡಬೇಕು ಹಾಗೂ ನೇರ ನಿಷ್ಠುರವಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.

    ಕೋಟ ಸಹಕಾರಿ ವ್ಯವಸಾಯಿಕ ಸಂಘದ ಬಿ.ಸಿ.ಹೊಳ್ಳ ಸಭಾಂಗಣದಲ್ಲಿ ಭಾನುವಾರ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಪತ್ರಕರ್ತನಾದವನಿಗೆ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳುವ ಸದಭಿರುಚಿ ಇರಬೇಕು. ಆಗ ಮಾತ್ರ ಪರಿಪೂರ್ಣ ಕಾರ್ಯನಿವರ್ಹಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು. ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು.

    ಇದೇ ಸಂದರ್ಭ ಹಿರಿಯ ಪತ್ರಕರ್ತ ಹಾಗೂ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಹಿರಿಯ ಪತ್ರಕರ್ತ ಹಾಗೂ ಕನ್ನಡಪ್ರಭ ಪತ್ರಿಕೆಯ ಉಪಸಂಪಾದಕ ಜೋಗಿ( ಗಿರೀಶ ರಾವ್ ಹತ್ವಾರ್) ಅಭಿನಂದನಾ ನುಡಿಗಳನ್ನಾಡಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿಶ್ವೇಶ್ವರ ಭಟ್ ಅವರ ಕೊಡುಗೆ ಅಪಾರವಾದದ್ದು. ಈ ಕ್ಷೇತ್ರಕ್ಕೆ ಹೊಸತನ ಹಾಗೂ ನವ ಆಯಾಮ ನೀಡಿದ ಸಾಧನೆ ಇವರಿಗೆ ಸಲ್ಲಬೇಕು ಎಂದರು.

    ಸಮಾರಂಭದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಕೋಟ ಶ್ರೀನಿವಾಸ ಪೂಜಾರಿ, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಅಲೆವೂರು, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಮಹಮ್ಮದ್ ಶರೀಫ್, ಬೈಂದೂರು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್, ಹೆಬ್ರಿಯ ಸುಕುಮಾರ್ ಮುನಿಯಾಲು, ಕುಂದಾಪುರದ ನಾಗರಾಜ್ ರಾಯಪ್ಪನಮಠ ಮತ್ತಿತರರು ಇದ್ದರು.

    ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಪತ್ರಕರ್ತರಾದ ಶೇಖರ್ ಅಜೆಕಾರು ಮತ್ತು ಶಶಿಧರ ಹೆಮ್ಮಣ್ಣ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಶೇಖರ ಅಜೆಕಾರು ಕುಟುಂಬದವರಿಗೆ ಆರ್ಥಿಕ ಧನಸಹಾಯ ನೀಡಲಾಯಿತು. ಶಿವಾನಂದ ತಗಡೂರು ಮತ್ತು ಜೋಗಿ ಅವರನ್ನು ಗೌರವಿಸಲಾಯಿತು.

    ತಾಲ್ಲೂಕು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿದರು. ಸಮಾರಂಭದ ಸಂಚಾಲಕ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿಮಾತನಾಡಿದರು. ಕಾರ್ಯದರ್ಶಿ ಹರೀಶ ಕಿರಣ್ ಕುಮಾರ್ ತುಂಗ ವಂದಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

    ಪತ್ರಕರ್ತ ವಿಶ್ವೇಶ್ವರ ಭಟ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರಕ್ಕೆ ವಡ್ಡರ್ಸೆ ರಘುರಾಮ ಶೆಟ್ಟರ ಕೊಡುಗೆ ಅದ್ಬುತವಾದದ್ದು. ಬ್ರಹ್ಮಾವರ ಪತ್ರಕರ್ತ ಸಂಘ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ನಮ್ಮ ಸರಕಾರ ವಡ್ಡರ್ಸೆ ಹೆಸರಲ್ಲಿ ಟಿ.ಎಸ್.ಆರ್. ಮಾದರಿಯ ಪ್ರಶಸ್ತಿ ನೀಡಬೇಕು ಎಂದರು.

  • ಕುಂದಾಪುರ :ಗೀತಾಜಯಂತಿ – ಕನ್ನಡ ಭಾಷಣ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಕಾಲೇಜಿನ ಶ್ರುತಿಕಾ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ :ಗೀತಾಜಯಂತಿ – ಕನ್ನಡ ಭಾಷಣ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಕಾಲೇಜಿನ ಶ್ರುತಿಕಾ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಮದ್ಭಗವದ್ಗೀತಾ ಆಚರಣಾ ಸಮಿತಿಯವರು ಗೀತಾ ಜಯಂತಿಯ ಪ್ರಯುಕ್ತ ಆಯೋಜಿಸಿದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರುತಿಕಾ ಶೆಟ್ಟಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ವಿಜೇತಳಾಗಿ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.

    ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

  • ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿ ದಿವೀಶ್ ರಾಜ್ಯ ಮಟ್ಟಕ್ಕೆ ಆಯ್ಕೆ

    ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿ ದಿವೀಶ್ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಶ್ರೀ ಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿಯವರು ಡಿ.16 ರಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನ ಕುಂದಾಪುರದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದಿವೀಶ್ ಶೆಣೈ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

  • ಬೈಂದೂರಿನಲ್ಲಿ ಜನವರಿ 7ರಂದು ನಡೆಯುವ ರಾಜ್ಯ ಮಟ್ಟದ ಕಂಬಳಕ್ಕೆ ಮುಹೂರ್ತ

    ಬೈಂದೂರಿನಲ್ಲಿ ಜನವರಿ 7ರಂದು ನಡೆಯುವ ರಾಜ್ಯ ಮಟ್ಟದ ಕಂಬಳಕ್ಕೆ ಮುಹೂರ್ತ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: 2024ರ ಜನವರಿ 07 ರಂದು ಬೈಂದೂರಿನ ಗಂಗನಾಡು ಸಮೀಪದ ಕ್ಯಾರ್ತೂರು ಕಂಬಳ ಗದ್ದೆಯಲ್ಲಿ ನಡೆಯುವ ರಾಜ್ಯ ಮಟ್ಟದ ಹೊನಲು ಬೆಳಕಿನ ಕಂಬಳೋತ್ಸವಕ್ಕೆ ಶುಕ್ರವಾರ ಕಂಬಳಗದ್ದೆ ಮುಹೂರ್ತ ಕಾರ್ಯಕ್ರಮ ನಡೆಯಿತು.

    ಕಂಬಳ ಗದ್ದೆಯ ಮುಹೂರ್ತ ನೆರವೇರಿಸಿ ಮಾತನಾಡಿದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗಂಗನಾಡು, ಕ್ಯಾರ್ತೂರು, ವನರೊಡ್ಡು ಭಾಗದಲ್ಲಿ ಧಾರ್ಮಿಕ ಹಿನ್ನೆಲೆಯ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ನರಸಿಂಹ ದೇವಸ್ಥಾನಗಳನ್ನು ಹೊಂದಿದ್ದು, ಕೃಷಿಯೇ ಇಲ್ಲಿನ ಜನರ ಬದುಕಾಗಿದೆ. ವಾರ್ಷಿಕವಾಗಿ ಗ್ರಾಮೀಣ ಭಾಗದ ರೈತರನ್ನು ಒಗ್ಗೂಡಿಸುವ ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಬೈಂದೂರಿನಲ್ಲಿ ರಾಜ್ಯಮಟ್ಟದ ಕಂಬಳವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಕಡೆಯಿಂದ ಹತ್ತು ಸಾವಿರಕ್ಕೂ ಅಧಿಕ ರೈತರು ಆಗಮಿಸಲಿದ್ದಾರೆ. ಅತ್ಯಾಧುನಿಕ ರೀತಿಯಲ್ಲಿ ಕಂಬಳವನ್ನು ಆಯೋಜಿಸಿದ್ದು ಕಂಬಳದಲ್ಲಿ ವಿಜೇತರಾದವರಿಗೆ ಚಿನ್ನದ ಪದಕಗಳನ್ನು ನೀಡಲಾಗುವುದು. ಕಂಬಳ ಸಮಿತಿ ಸೇರಿದಂತೆ ಎಲ್ಲಾ ಹಿರಿಯರ ಮತ್ತು ವಿವಿಧ ಸಮುದಾಯಗಳ ಸಹಕಾರದೊಂದಿಗೆ ಅದ್ದೂರಿಯ ಬೈಂದೂರು ಕಂಬಳೋತ್ಸವ ನಡೆಯಲಿದೆ. ಈ ಸಂಧರ್ಭದಲ್ಲಿ ಸಾಧಕ ಕಂಬಳದ ಓಟಗಾರರನ್ನು ಹಿರಿಯ ರೈತರನ್ನು ಹಾಗೂ ಕಂಬಳದ ಪೋಷಕರನ್ನು ನಮ್ಮಾನಿಸಲಾಗುವುದು ಎಂದರು.

    ಸ್ಥಳೀಯ ಪುರೋಹಿತ ವಾಸುದೇವ ಅವರು ಮುಹೂರ್ತಪೂಜಾ ವಿಧಿ ವಿಧಾನ ಕಾರ್ಯಗಳನ್ನು ಪೂರೈಸಿದರು. ಈ ಸಂದರ್ಭ ಮಂಜು ಪೂಜಾರಿ ಸಸಿಹಿತ್ಲು, ಗಣಪ ಮರಾಠಿ, ರಾಜು ಮರಾಠಿ ಬೆಳಕೊಡ್ಲು, ರಾಜು ದೇವಪ್ಪನಡೆ, ದೇವಪ್ಪ ಹಂಡೆ, ಶಿವಯ್ಯ ಗಂಗನಾಡು, ಹರೀಶ್ ಮರಾಠಿ ಗಂಗನಾಡು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ರು.