Category: ಸುದ್ದಿ

  • ಕೋಟ :ಡಿ.2ರಿಂದ-6ರ ತನಕ ಕೋಟ ವಿವೇಕ ವಿದ್ಯಾಸಂಸ್ಥೆ ಅಮೃತಮಹೋತ್ಸವ

    ಕೋಟ :ಡಿ.2ರಿಂದ-6ರ ತನಕ ಕೋಟ ವಿವೇಕ ವಿದ್ಯಾಸಂಸ್ಥೆ ಅಮೃತಮಹೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ವಿದ್ಯಾಸಂಘ ರಿ. ಕೋಟ ಆಡಳಿತಕ್ಕೊಳಪಟ್ಟ ವಿವೇಕ ವಿದ್ಯಾಸಂಘಗಳ ಅಮೃತಮಹೋತ್ಸವ ಕಾರ್ಯಕ್ರಮ ಡಿ.೨ರಿಂದ ೬ರ ತನಕ ವಿದ್ಯಾಸಂಸ್ಥೆಯ ಆವರಣದಲ್ಲಿ ಜರಗಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಅವರು ನ.೧೬ರಂದು ಸಂಸ್ಥೆಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಪ್ರಯುಕ್ತ ಡಿ.೨ರಂದು ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಒ.ಎನ್.ಜಿ.ಸಿ. ಸಂಸ್ಥೆಯ ನಿವೃತ್ತ ಚೀಫ್ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

    ಚಿತ್ರನಟಿ ವಿನಯಪ್ರಸಾದ್, ಜಿಲ್ಲಾ ಉಸ್ತವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭ ಐ.ಸಿ.ಐ.ಸಿ.ಐ. ಪ್ರತಿಷ್ಠಾನ ಕೊಡಮಾಡಿದ ಸೆಮಿನಾರ್ ಹಾಲ್‌ಗಳ ಲೋಕಾರ್ಪಣೆ, ಟೆಕ್ನಾಲಜಿ ಸೆಂಟರ್ ಲೋಕಾರ್ಪಣೆ ನಡೆಯಲಿದೆ ಎಂದರು.

    ಡಿ.೩ರಂದು ಬೆಳಗ್ಗೆ ೯.೩೦ಕ್ಕೆ ವಿವೇಕ ಹಿಂದಿನ ವಿದ್ಯಾರ್ಥಿಗಳ ಸಮಾಗಮ ಅಮೃತಮಿಲನ, ಹಿಂದಿನ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ನಡೆಯಲಿದ್ದು, ಉದ್ಯಮಿ ಚೇಂಪಿ ಮಾಧವ ಪೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ. ಪ್ರಭಾಕರ ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ರಂಗಭೂಮಿ,
    ಚಲನಚಿತ್ರ ಕಲಾವಿದೆ ಬಿ. ಜಯಶ್ರೀ, ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇಂಪಿ ರಮಾನಂದ ಭಟ್ ಉಪಸ್ಥಿತರಿರುವರು.

    ಡಿ.೪ರಂದು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಜರಗಲಿದ್ದು, ನಾಡೋಜ ಡಾ.ಜಿ.ಶಂಕರ್‌ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿರುವರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿಜ್ಞಾನ, ವೈದ್ಯಕೀಯ, ಪಾರಂಪರಿಕ, ಕೃಷಿ, ಕೈಗಾರಿಕೆ ಮೊದಲಾದ ವಿಚಾರದ ಕುರಿತು ವಸ್ತುಪ್ರದರ್ಶನ ಜರಗಲಿದ್ದು ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು
    ಕರೆತರುವ ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯವಿದೆ. ಪ್ರತಿದಿನ ಜಾದು, ಸಂಗೀತ ರಸಮಂಜರಿ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿದೆ.

    ಡಿ.೫ಮತ್ತು ೬ರಂದು ಸಂಸ್ಥೆಯ ಸಹಕಾರದೊಂದಿಗೆ ಕ.ಸಾ.ಪ. ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಕಾರ್‍ಯದರ್ಶಿ ರಾಮದೇವ ಐತಾಳ, ಖಜಾಂಚಿ ವೆಲೇರಿಯನ್ ಮೆನೇಜಸ್, ಜತೆ ಕಾರ್‍ಯದರ್ಶಿ ಮಂಜುನಾಥ ಉಪಾಧ್ಯ, ಸದಸ್ಯರಾದ ಭಾಸ್ಕರ ಹಂದೆ, ಸುಬ್ರಹ್ಮಣ್ಯ ಹೇರ್ಳೆ, ಪ್ರಾಂಶುಪಾಲ ಜಗದೀಶ್ ನಾವಡ, ಸಾಂಸ್ಕೃತಿಕ ಸಮಿತಿಯ ನರೇಂದ್ರ ಕುಮಾರ್, ಪ್ರಚಾರ ಸಮಿತಿಯ ಪ್ರಶಾಂತ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

  • ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆ.

    ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆ.

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ನ. 11ರಂದು ಸೈಂಟ್ ಪಿಯೂಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಯ ಈರ್ವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದ ರಂಗೋಲಿ ಸ್ಪರ್ಧೆಯಲ್ಲಿ 10ನೆಯ ತರಗತಿ ಸಾಹಿತ್ಯಾ ಪ್ರಥಮ, 10ನೆಯ ತರಗತಿ ವೀಕ್ಷಿತ್ ಮಿಮಿಕ್ರಿಯಲ್ಲಿ ಪ್ರಥಮ, ಕವನ ವಾಚನದಲ್ಲಿ 10ನೆಯ ತರಗತಿ ರಾಧಿಕಾ ದ್ವಿತೀಯ ಸ್ಥಾನ ಪಡೆದಿದ್ದಾರೆ.

    ಇವರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಅಭಿನಂದಿಸಿದೆ.

  • ಕುಂದಾಪುರ :ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ :ಸಿಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ

    ಕುಂದಾಪುರ :ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ :ಸಿಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಿಎ/ ಸಿಎಸ್ ಪ್ರೊಫೆಷನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸಿದ ನವೆಂಬರ್ 2023ರ ಸಿಎಸ್‌ಇಇಟಿ (ಸಿಎಸ್ ಫೌಂಡೇಶನ್) ಪರೀಕ್ಷೆಯಲ್ಲಿ 17 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀನಿಧಿ ನಾಯ್ಕ್‌(153), ನಿಹಾರ್‌ ಎಸ್.(139), ವೈಷ್ಣವಿ ಶೆಟ್ಟಿಗಾರ್‌(137), ವೇದಾಂತ್‌ ಎಮ್. ಶೆಟ್ಟಿ(137), ಆಕಾಶ್‌ ಎಮ್. ಶೆಟ್ಟಿ(136), ಸುಮಂತ್‌(133), ನಿಖಿಲ್‌ ಆರ್‌. ಪೂಜಾರಿ(129), ಆಯುಷ್‌(128), ಶ್ರಾವ್ಯ ಎಸ್. ಶೆಟ್ಟಿ(120), ಸಹನಾ(118), ರಿಯಾ ಫೆರ್ನಾಂಡೀಸ್‌(117), ಭೂಮಿಕ(112), ಗಗನ್‌ಕುಮಾರ್‌ ಶೆಟ್ಟಿ(108), ಪ್ರೇಕ್ಷಿತಾ ಶೆಟ್ಟಿ(102), ಪೂರ್ವಿಕಾ(100), ರತೀಶ್‌(100) ಮತ್ತು ಶ್ರುತಿ(100) ಅಂಕಗಳೊಂದಿಗೆ ಸಿಎಸ್ ಕೋರ್ಸುಗಳ ಪ್ರಥಮ ಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದಿ ಸಿಎಸ್ ಎಕ್ಸಿಕ್ಯೂಟಿವ್ ಹಂತಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯಲ್ಲಿ ಅನುಭವಿ ಕಂಪೆನಿ ಸೆಕ್ರೆಟರಿಯವರನ್ನು ಒಳಗೊಂಡಂತೆ ಗುಣಮಟ್ಟದ ತರಬೇತುದಾರರಿಂದ ತರಬೇತಿಯನ್ನು ನೀಡಿ ಅತ್ಯಧಿಕ ಪೂರಕ ಪರೀಕ್ಷೆಗಳನ್ನು ನಡೆಸಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿತ್ತು. ಅನುಭವಿ ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದ ಇಂತಹ ಫಲಿತಾಂಶ ಸಾಧ್ಯವಾಯಿತು. ಸಿಎ/ಸಿಎಸ್ ಫಲಿತಾಂಶದಲ್ಲಿ ಶಿಕ್ಷ ಪ್ರಭ ಅಕಾಡೆಮಿಯ ವಿದ್ಯಾರ್ಥಿಗಳ ನಿರಂತರ ಸಾಧನೆ ಮುಂದುವರಿಯಲು ಪೋಷಕರ ಸಹಕಾರದಿಂದ ಬೋಧಕ ಸಿಬ್ಬಂದಿಗಳ ಅವಿರತ ಶ್ರಮಕ್ಕೆ ವಿದ್ಯಾರ್ಥಿಗಳು ನೀಡಿದ ಸಹಕಾರ ಕಾರಣ ಎಂದು ಸಂಸ್ಥೆಯ ಮುಖ್ಯಸ್ಥರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಿಸೆಂಬರ್ 1ರಿಂದ ಸಿಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಗೆ ತರಬೇತಿಯನ್ನು ಪ್ರಾರಂಭಿಸಿ ಮುಂದಿನ ಹಂತದಲ್ಲೂ ವಿದ್ಯಾರ್ಥಿಗಳಿಗೆ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

    “ನಾನು ಸಿಎಸ್‌ ಪರೀಕ್ಷೆಗಾಗಿ ತಯಾರಿಯನ್ನು ನನ್ನ ಮೊದಲ ಸಿಎಸ್‌ ತರಗತಿಯಿಂದಲೇ ಪ್ರಾರಂಭಿಸಿದೆ. ನನ್ನ ತಂದೆ-ತಾಯಿ ಎಂದೂ ವಿದ್ಯಾಭ್ಯಾಸದ ವಿಷಯದಲ್ಲಿ ಒತ್ತಡವನ್ನು ಹೇರಲಿಲ್ಲ. ನಾನು ಭರವಸೆ ಕಳೆದುಕೊಂಡಾಗಲೆಲ್ಲಾ ನನ್ನನ್ನು ಹುರಿದುಂಬಿಸಿ ನಾನು ಈ ಮಟ್ಟಕ್ಕೆ ಬರುವಂತೆ ಮಾಡಿದ್ದಾರೆ. ನಾನು ಖಂಡಿತವಾಗಿಯೂ ಶಿಕ್ಷ ಪ್ರಭ ಅಕಾಡೆಮಿಗೆ ಆಭಾರಿಯಾಗಿದ್ದೇನೆ. ನನ್ನ ಫಲಿತಾಂಶದ ನಂತರ ನಾನು ತುಂಬಾ ತೃಪ್ತಳಾಗಿದ್ದೇನೆ, ಇದಕ್ಕೆ ನನ್ನ ಶಿಕ್ಷಕರ ಪ್ರೋತ್ಸಾಹ ಮತ್ತು ತಂದೆ-ತಾಯಿಯರ ಆಶೀರ್ವಾದವೇ ಕಾರಣ. ಸ್ಪೇಸ್‌ ನಿರಂತರವಾಗಿ ನಮ್ಮ ಪರೀಕ್ಷಾ ತಯಾರಿಗೆ ಹುರಿದುಂಬಿಸಿ ಮಾರ್ಗದರ್ಶನ ನೀಡಿತ್ತು, ಅವರಿಲ್ಲದೇ ಇಂದು ಈ ಫಲಿತಾಂಶ ಸಾಧ್ಯವಾಗುತ್ತಿರಲಿಲ್ಲ.” – ಶ್ರೀನಿಧಿ ನಾಯ್ಕ್‌ (153ಅಂಕ) ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ

  • ಪ್ರತೀ ಮೀನುಗಾರಿಕಾ ಬಂದರುಗಳಿಗೆ ಅಗ್ನಿಶಾಮಕ ಹಾಗೂ ಪಂಪ್ ಸೆಟ್ ಯೋಜನೆ ಜ್ಯಾರಿಗೆ ಚಿಂತನೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಪ್ರತೀ ಮೀನುಗಾರಿಕಾ ಬಂದರುಗಳಿಗೆ ಅಗ್ನಿಶಾಮಕ ಹಾಗೂ ಪಂಪ್ ಸೆಟ್ ಯೋಜನೆ ಜ್ಯಾರಿಗೆ ಚಿಂತನೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮೀನುಗಾರಿಕಾ ಬೋಟುಗಳು ಅಗ್ನಿ ಆಕಸ್ಮಿಕದಿಂದ ಸುಟ್ಟು ಕರಕಲಾದ ಘಟನೆ ಖೇದಕರ. ಮುಂದಿನ ದಿನಗಳಲ್ಲಿ ಪ್ರತೀ ಮೀನುಗಾರಿಕಾ ಬೋಟುಗಳ ನಿಲುಗಡೆ ಸ್ಥಳಗಳಲ್ಲಿ ಅಗ್ನಿಶಾಮಕ ಹಾಗೂ ಪಂಪ್ ಸೆಟ್ ಸ್ಥಾಪನೆಗೆ ಮುಖ್ಯಮಂತ್ರಿಗಳೊಮದಿಗೆ ಚರ್ಚಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

    ಬೈಂದೂರು ತಾಲೂಕಿನ ಗಂಗೊಳ್ಳಿಯ ಬಂದರಿನಲ್ಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಭೇಟಿ ನೀಡಿದರು. ಬಳಿಕ ಅಗ್ನಿ ಆಕಸ್ಮಿಕ ನಡೆದ ಸ್ಥಳವನ್ನು ವೀಕ್ಷಿಸಿದ ಸಚಿವರು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಚರ್ಚೆ ನಡೆಸಿದರು.

    ಇದೊಂದು ಅಪರೂಪದ ದುರಂತ. ಇಲ್ಲಿ ಅಗ್ನಿ ಅವಘಡ ಹೇಗೆ ಸಂಭವಿಸಿದೆ ಎನ್ನುವುದೇ ನಿಗೂಢವಾಗಿದೆ. ಅಗ್ನಿ ದುರಂತದಿಂದ ಸುಮಾರು 13 ರಿಂದ 15 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಇನ್ನು 15 ದಿನಗಳಲ್ಲಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು. ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಉಡುಪಿ ಎಸ್ಪಿ ಡಾ.ಕೆ.ಅರುಣ್, ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನ.18ರಂದು ಕುಂದಾಪುರದಲ್ಲಿ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆ

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನ.18ರಂದು ಕುಂದಾಪುರದಲ್ಲಿ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕುಂದಾಪುರ ಶೈಕ್ಷಣಿಕ ವಲಯದ ಕನ್ನಡ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪೊಲೀಸ್ ಎಂದರೇ ಭಯವಲ್ಲ ಭರವಸೆ ಎಂಬ ಶೀರ್ಷಿಕೆಯಡಿ ‘ನಾ ಕಂಡಂತೆ ಪೊಲೀಸ್’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಲ್ಲಿರುವ ಪೊಲೀಸರ ಬಗೆಗಿನ ಅಭಿಪ್ರಾಯವನ್ನು ಅಕ್ಷರ ರೂಪದಲ್ಲಿ ಹೊರ ಹಾಕಲು ನ.18ರ ಶನಿವಾರ ಅಪರಾಹ್ನ 2.30ಕ್ಕೆ ಕುಂದಾಪುರ ಬೋರ್ಡ್ ಹೈಸ್ಕೂಲ್‌ನ ಕಲಾಮಂದಿರದಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದೆ.

    ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ. ಸಿದ್ದಲಿಂಗಪ್ಪ ಇವರು ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಗಣಪತಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಉಪಾಧ್ಯಕ್ಷ ವಿನಯ ಪಾಯಸ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ನ.30ರಂದು ನಡೆಯುವ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಬಹುಮಾನ ವಿತರಿಸಲಿದ್ದು ಸಮಾಜದ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

    ತಾಲೂಕಿನ ಎಲ್ಲಾ ಸರಕಾರಿ ಪ್ರೌಢಶಾಲೆ ಮತ್ತು ಅನುದಾನಿತ ಸೇರಿದಂತೆ ಒಟ್ಟು 27 ಶಾಲೆಗಳ ಪೈಕಿ ಆಯ್ದ 5 ಮಂದಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

  • ಕೋಟ :ಈಜು ಸ್ಪರ್ಧೆ ಮೂಡುಗಿಳಿಯಾರಿನ ವಿಖ್ಯಾತ ಹೇರ್ಳೆ ರಾಜ್ಯ ಮಟ್ಟಕ್ಕೆ

    ಕೋಟ :ಈಜು ಸ್ಪರ್ಧೆ ಮೂಡುಗಿಳಿಯಾರಿನ ವಿಖ್ಯಾತ ಹೇರ್ಳೆ ರಾಜ್ಯ ಮಟ್ಟಕ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ವಿವೇಕ ಪದವಿಪೂರ್ವ ಕಾಲೇಜು, ಕೋಟ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯವರು ನಡೆಸಿದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಎರಡು ಪ್ರಥಮ ಹಾಗೂ ಒಂದು ದ್ವಿತೀಯ ಸ್ಥಾನ ಗಳಿಸಿ ವಿಖ್ಯಾತ ಹೇರ್ಳೆ ಯವರು ನ.15ರಂದು ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

    ಕೋಟ ವಿವೇಕ ಪದವಿಪೂರ್ವ ಕಾಲೇಜು ಕೋಟ ಇಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ದಿವಂಗತ ಗೋಪಾಲ ಅಡಿಗ ಪಾರಂಪಳ್ಳಿ ಅವರ ಶಿಷ್ಯ ಹಾಗೂ ವಿಶ್ವನಾಥ ಹೇರ್ಳೆ ಗಿಳಿಯಾರು ಮತ್ತು ನಾಗರತ್ನ ಜಿ ದಂಪತಿಯ ಪುತ್ರರಾಗಿರುತ್ತಾರೆ.

  • ಗಂಗೊಳ್ಳಿ ಅಗ್ನಿ ಅವಘಡ : 10ಕೋಟಿ ಪರಿಹಾರಕ್ಕೆ ಸಂಸದ, ಶಾಸಕರಿಂದ ಸಿ.ಎಂ. ಭೇಟಿ

    ಗಂಗೊಳ್ಳಿ ಅಗ್ನಿ ಅವಘಡ : 10ಕೋಟಿ ಪರಿಹಾರಕ್ಕೆ ಸಂಸದ, ಶಾಸಕರಿಂದ ಸಿ.ಎಂ. ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಗಂಗೊಳ್ಳಿಯಲ್ಲಿ ಸೋಮವಾರ ಬೆಂಕಿಗಾಹುತಿಯಾದ ಮೀನುಗಾರಿಕಾ ಬೋಟುಗಳಿಗೆ ಪರಿಹಾರ ನೀಡುವಂತೆ ಶಿವಮೊಗ್ಗ ಸಂಸದ ಬಿ.ವೈ; ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಬುಧವಾರ ಮುಖ್ಮಂತ್ರಿ ಸಿದ್ಧರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ.

    ಅಗ್ನಿ ಅವಘಡದಲ್ಲಿ ಸುಮಾರು 8 ದೋಣಿಗಳು ಸಂಪೂರ್ಣ ಹಾನಿಯಾಗಿದ್ದು, 2 ದೋಣಿಗಳು ಭಾಗಶಃ ಹಾನಿ, 2 ಡಿಂಗಿ ಹಾಗೂ ಮೀನುಗಾರಿಕೆ ಬಲೆ ಹಾನಿಯಾಗಿದೆ. ಈ ಅವಘಡದಿಂದ ಮೀನುಗಾರರು ಆಘಾತ ಹೊಂದಿದ್ದಾರೆ. ಈಗಾಗಲೇ ತೂಫಾನ್, ಚಂಡಮಾರುತ ಹಾಗೂ ಇನ್ನಿತರೆ ಕಾರಣಗಳಿಂದ ಮೀನುಗಾರಿಕೆ ನಡೆಸದೆ ಆರ್ಥಿಕವಾಗಿ ನಷ್ಟ ಅನುಭವಿಸಿ ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಪ್ರಸ್ತುತ ಅಗ್ನಿ ಅವಘಡದಲ್ಲಿ ಹಾನಿಗೊಳಗಾದ ದೋಣಿಗಳಿಗೆ10 ಕೋಟಿ ರೂ. ಪರಿಹಾರ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.

  • ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಭೇಟಿ

    ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಗಂಗೊಳ್ಳಿ : ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಸ್ಥಳೀಯ ಮೀನುಗಾರ ಮುಖಂಡರು ಮತ್ತು ನಷ್ಟಕ್ಕೆ ಒಳಗಾದ ಬೋಟ್ ಮಾಲೀಕರ ಜೊತೆ ಚರ್ಚೆ ನಡೆಸಿ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

    ಬಳಿಕ ಮಾತನಾಡಿದ ಅವರು, ಸರಕಾರ ಈ ದುರ್ಘಟನೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿದೆ. ಮುಖ್ಯಮಂತ್ರಿ ಕಛೇರಿಯಿಂದ ಘಟನೆ ಬಗ್ಗೆ ಮಾಹಿತಿ ಕೇಳಿದ್ದು, ಸಮಗ್ರ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮೀನುಗಾರಿಕೆ ಇಲಾಖೆ ಸಚಿವರು ಕೂಡ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದು, ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಿ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
    ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಅಗ್ನಿಶಾಮಕ ದಳದ ಘಟಕ ಪ್ರಾರಂಭಿಸುವ ಬಗ್ಗೆ, ಪಂಪ್ ಹೌಸ್ ನಿರ್ಮಾಣದ ಮತ್ತು ಮ್ಯಾಂಗನೀಸ್ ವಾರ್ಫ್ ಪ್ರದೇಶದ ಸ್ವಚ್ಛತೆ ಬಗ್ಗೆ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು ಹಾಗೂ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ ಅವರು, ಬೋಟ್ ಅಗ್ನಿ ದುರಂತದಲ್ಲಿ ಬೋಟ್ ಮಾಲೀಕರು ಹಾಗೂ ಇದನ್ನೇ ನಂಬಿಕೊಂಡಿರುವ ಮೀನುಗಾರ ಕುಟುಂಬಗಳು ಅನುಭವಿಸುತ್ತಿರುವ ಸಂಕಷ್ಟ ತಿಳಿದಿದ್ದು, ಇವರ ಕಷ್ಟಗಳಿಗೆ ಸ್ಪಂದಿಸುವ ಪ್ರಯತ್ನ ನಡೆಸುವುದಾಗಿ ಅವರು ಹೇಳಿದರು.
    ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಅಂಜನಾದೇವಿ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ (ತನಿಖೆ) ಬಸವರಾಜ್, ಸ್ಥಳೀಯ ಬೋಟ್ ಮಾಲೀಕರು, ಮೀನುಗಾರ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.

  • ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಸ್ಥಳಕ್ಕೆ ಮಾಜಿ ಸಚಿವ ಪ್ರಮೋದ ಮಧ್ವರಾಜ್ ಭೇಟಿ, ಪರಿಶೀಲನೆ

    ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಸ್ಥಳಕ್ಕೆ ಮಾಜಿ ಸಚಿವ ಪ್ರಮೋದ ಮಧ್ವರಾಜ್ ಭೇಟಿ, ಪರಿಶೀಲನೆ

    ಕುಂದಾಪುರ ಮಿರರ್ ಸುದ್ದಿ..

    ಗಂಗೊಳ್ಳಿ : ಗಂಗೊಳ್ಳಿಯಲ್ಲಿ ನಡೆದ ಬೋಟ್ ಅಗ್ನಿ ದುರಂತ ಸ್ಥಳಕ್ಕೆ ಮಾಜಿ ಸಚಿವ ಪ್ರಮೋದ ಮಧ್ವರಾಜ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಸ್ಥಳೀಯ ಮೀನುಗಾರ ಮುಖಂಡರು ಮತ್ತು ನಷ್ಟಕ್ಕೆ ಒಳಗಾದ ಬೋಟ್ ಮಾಲೀಕರ ಜೊತೆ ಚರ್ಚೆ ನಡೆಸಿ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿ ಮೀನುಗಾರರಿಗೆ ಧೈರ್ಯ ತುಂಬಿದರು.
    ಬೋಟ್ ಅಗ್ನಿ ದುರಂತದಲ್ಲಿ ಕೋಟ್ಯಾಂತರ ರೂ. ನಷ್ಟ ಉಂಟಾಗಿದೆ. ಬೋಟ್ ಮಾಲೀಕರು ಮತ್ತು ಮೀನುಗಾರರು ಅತಂತ್ರರಾಗಿದ್ದಾರೆ. ಮೀನುಗಾರರು ಬದುಕು ಕಟ್ಟಿಕೊಳ್ಳಲು ಮತ್ತು ಹೊಸ ಬೋಟ್ ನಿರ್ಮಾಣ ಮಾಡಲು ಸರಕಾರ ಸ್ಪಂದಿಸಬೇಕು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಗರಿಷ್ಠ ಪರಿಹಾರ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಮನವಿ ಮಾಡುವುದಾಗಿ ಹೇಳಿದ ಅವರು, ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತಂದು ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡುವುದಾಗಿ ಅವರು ಹೇಳಿದರು.

    ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್, ಸ್ಥಳೀಯ ಬೋಟ್ ಮಾಲೀಕರು, ಮೀನುಗಾರ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ :ತಲ್ಲೂರು ಸಂತ ಫ್ರಾನ್ಸಿಸ್ ಆಸೀಸಿ ಚರ್ಚ್ ಕ್ರೈಸ್ತರಿಂದ ದೀಪಾವಳಿ ಆಚರಣೆ

    ಕುಂದಾಪುರ :ತಲ್ಲೂರು ಸಂತ ಫ್ರಾನ್ಸಿಸ್ ಆಸೀಸಿ ಚರ್ಚ್ ಕ್ರೈಸ್ತರಿಂದ ದೀಪಾವಳಿ ಆಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತಲ್ಲೂರು ಸಂತ ಫ್ರಾನ್ಸಿಸ್ ಆಸೀಸಿ ಚರ್ಚ್ ವಠಾರದಲ್ಲಿ, ಚರ್ಚ್ ವತಿಯಿಂದ ಕ್ರೈಸ್ತರು ದೀಪಾವಳಿ ಆಚರಣೆಯನ್ನು ನ.12 ರಂದು ಭಾನುವಾರ ಸಂಜೆಯ ವೇಳೆ ಆಚರಿಸಿದರು.

    ಈ ದೀಪಾವಳಿಯ ಕಾರ್ಯಕ್ರಮಕ್ಕೆ, ತಲ್ಲೂರು ಗ್ರಾ.ಪಂಚಾಯಿತಿಯ ಅಧ್ಯಕ್ಷರಾದ ಗಿರೀಶ್ ನಾಯ್ಕ್, ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಹೆಮ್ಮಾಡಿ ಗ್ರಾಮ ಪಂಚಾತಿಯಿಯ ಅಧ್ಯಕ್ಷೆ ನೇತ್ರಾವತಿ, ಕಟ್‍ಬೆಲ್ತೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ತಲ್ಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗಿರೀಶ್ ನಾಯ್ಕ್ ಮಾತನಾಡಿ, ನಮ್ಮಲ್ಲಿ ಕ್ರೈಸ್ತ ಹಿಂದುಗಳ ಸಂಬಂಧ ಉತ್ತಮವಾಗಿದೆ. ನಾವು ಅನ್ಯೋನತೆಯಿಂದ ಇದ್ದೇವೆ. ಕ್ರೈಸ್ತ ಬಾಂಧವರು ದೀಪಾವಳಿಯನ್ನು ನಮ್ಮ ಜೊತೆ ಆಚರಿಸುವುದಕ್ಕೆ ಬಹಳ ಸಂತೋಷವಾಗುತ್ತದೆ, ಇಲ್ಲಿ ತೆರಾಲಿ ನಡೆಯುತ್ತಿರುವಾಗ ಕ್ರೈಸ್ತರ ಸಂಖ್ಯೆಗಿಂತ ಹಿಂದುಗಳ ಬಾಂಧವರೆ ಭಾಗವಹಿಸುವುದು ಹೆಚ್ಚು. ಇದು ನಮ್ಮಲ್ಲಿನ ಸಾಮರಸ್ಯಕ್ಕೆ ಒಳ್ಳೆಯ ಉದಾಹರಣೆಯಾಗಿದೆ ಎಂದರು.

    ಸಂತ ಫ್ರಾನ್ಸಿಸ್ ಆಸೀಸಿ ಚರ್ಚಿನ ಧರ್ಮಗುರು ವಂ| ಎಡ್ವಿನ್ ಡಿ’ಸೋಜಾ “ ದೀಪಾವಳಿ ಎಲ್ಲರ ಹಬ್ಬ. ಇದು ಬೆಳಕಿನ ಹಬ್ಬ, ಅಂದರೆ ಕತ್ತಲೆಯಿಂದ ಬೆಳಕಿಗೆ ಬರುವುದು, ಪ್ರಾಣಿ ಪಕ್ಷಿ ಮರ ಗೀಡ ಎಲ್ಲವೂ ಸ್ಪಷ್ಟವಾಗಿ ಗೋಚರಿಸಿದರೆ ಕತ್ತಲೆ ಸರಿದು ಬೆಳಕಾಯಿತು ಎಂದು ಅಭಿಪ್ರಾಯ. ಆದರೆ, ಮನುಷ್ಯನ ಹೃದಯದಲ್ಲಿ ಬೆಳಕು ಏರ್ಪಟ್ಟಲ್ಲಿ ಅದೇ ನಿಜವಾದ ಬೆಳಕು, ನಾವು ಪ್ರತಿಯೊಬ್ಬರು ಹೃದಯದಲ್ಲಿರುವ ಕತ್ತಲೆಯನ್ನು ದೂರ ಮಾಡಿ, ನಾವೆಲ್ಲರೂ ಪ್ರೀತಿ ಬಾಂಧವ್ಯದಿಂದ ಸಹೋದರಂತೆ ಬಾಳುವ” ಎಂದು ಸಂದೇಶ ನೀಡಿದರು.

    ಈ ಸಂದರ್ಭದಲ್ಲಿ ಅತಿಥಿಗಳು, ಪಂಚಾಯತ್ ಸದಸ್ಯರು, ಅಹ್ವಾನಿತರು, ಚರ್ಚಿನ ಹಣಕಾಸಿನ ಸಮಿತಿ ಸದಸ್ಯರು, ಪಾಲನ ಮಂಡಳಿಯ ಸದಸ್ಯರು ಲೋಹದಾಕ್ರತಿಯ ವೃಕ್ಷದ ಎಲೆಗಳ ಮೇಲೆ ಹಲವಾರು ದೀಪಗಳನ್ನು ಬೆಳಗಿಸಿದರು. ಪಾಲನಮಂಡಳಿ ಕಾರ್ಯದರ್ಶಿ ರೀನಾ ಮೆಂಡೋನ್ಸಾ, 20 ಆಯೋಗಳ ಸಂಯೋಜಕ ರೋನಿ ಲೂಯಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷ ಕೆಲ್ವಿನ್ ಮೆಂಡೋನ್ಸಾ ಸ್ವಾಗತಿಸಿದರು. ಪ್ರೆಸಿಲ್ಲಾ ಮಿನೇಜೆಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.