ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಇದು ಜಾನಕಿ ಅಮ್ಮನ ಪ್ರೇರಣೆ ಈ ಪ್ರಶಸ್ತಿ ಪಡೆದ ನಾನೇ ಪುಣ್ಯವಂತಳು ಎಂದು ಖ್ಯಾತ ಗಾಯಕಿ ಪದ್ಮಭೂಷಣ ಕೆ.ಎಸ್.ಚಿತ್ರ ಹೇಳಿದರು.
ಮನಸ್ಮಿತ ಫೌಂಡೇಶನ್ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ಕೊಡಲ್ಪಡುವ ಡಾ.ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಮನಸ್ಮಿತ ರಾಷ್ಟ್ರೀಯ ಪುರಸ್ಕಾರವನ್ನ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಫಲಕವನ್ನು ಅನಾವರಣಗೈದ ನಾಡೋಜ ಡಾ. ಜಿ.ಶಂಕರ್ ಮಾತನಾಡಿ, ಇರ್ವರಿಗೆ ಪ್ರಶಸ್ತಿ ನೀಡಿದ್ದು ಅರ್ಥಪೂರ್ಣ, ಚಿತ್ರ ಅವರಂತಹ ಶ್ರೇಷ್ಠ ಗಾಯಕಿಗೆ ಪ್ರಶಸ್ತಿ ನೀಡುತ್ತಿರುವುದು ಈ ಕರಾವಳಿ ಭಾಗದ ಹೆಮ್ಮೆ ಇಂಥಹ ಕಾರ್ಯಕ್ರಮಗಳು ಕುಂದಾಪುರದ ಕಂಪನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದರು.
ಅಧ್ಯಕ್ಷತೆಯನ್ನು ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ಸಿ ತೋಳಾರ್ ವಹಿಸಿದ್ದರು.
ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಯುವ ಮೆರಿಡಿಯನ್ ಒಪೆರಾ ಪಾರ್ಕನ ಪಾಲುದಾರ ವಿನಯ್ ಕುಮಾರ್ ಶೆಟ್ಟಿ, ಗೀತಾನಂದ ಫೌಂಡೇಶನ್ ನಿರ್ದೇಶಕ ಪ್ರಶಾಂತ್ ಕುಂದರ್, ನೇಹಾ ಸತೀಶ್ ಪೂಜಾರಿ, ಕವಿತಾ ಪ್ರಕಾಶ್ ತೋಳಾರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಸತೀಶ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಡಾ.ಉಮೇಶ್ ಪುತ್ರನ್ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮವನ್ನು ಉಡುಪಿ ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ನಿರೂಪಿಸಿ ವಂದಿಸಿದರು.
ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರವು ಒಂದು ಲಕ್ಷ ರೂಪಾಯಿ ನಗದು, ಹಾಗೂ ಪ್ರಶಸ್ತಿಯನ್ನು ಒಳಗೊಂಡಿದೆ. ಹಾಗೂ ಮನಸ್ಥಿತ ರಾಷ್ಟ್ರೀಯ ಪುರಸ್ಕಾರವು ಇಪ್ಪತ್ತೈದು ಸಾವಿರ ರೂಪಾಯಿ ನಗದು, ಹಾಗೂ ಪ್ರಶಸ್ತಿಯನ್ನು ಒಳಗೊಂಡಿದೆ. ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಸತೀಶ್ ಪೂಜಾರಿ ನೇತೃತ್ವದಲ್ಲಿ ಕರ್ನಾಟಕದ ಶ್ರೇಷ್ಠ ಗಾಯಕ, ಗಾಯಕಿಯರು ಹಾಗೂ ವಾದ್ಯ ವೃಂದದವರಿಂದ ಅದ್ದೂರಿ ಸಂಗೀತ ಸಂಜೆ ನಡೆಯಿತು. ಮುಕ್ತ ಅವಕಾಶ ಕಲ್ಪಿಸಿದ್ದರ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಾವಿರಾರು ಪ್ರೇಕ್ಷಕರು ಭಾಗಿಯಾದರು.











