ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹಿಂದಿನ ಕಾಲದಲ್ಲಿ ಮಕ್ಕಳು ಪಾಠದೊಂದಿಗೆ ಆಟಕ್ಕೆ ಸಮಯ ಕೊಡುತ್ತಿದ್ದರೆ, ಕೊರೊನಾದ ನಂತರ ಆ ಸಮಯವನ್ನು ಮೊಬಲ್ ಕಸಿದುಕೊಂಡಿತ್ತು. ಪ್ರಯೋಜನವೇ ಇಲ್ಲದ ಮೊಬಲ್ ಗೇಮ್ಸ್ಗಳತ್ತ ಮಕ್ಕಳು ಆಸಕ್ತರಾಗುತ್ತಿದ್ದು, ಅದರಿಂದ ಹೊರಬರಲು ಇಂತಹ ಕಬಡ್ಡಿ ಪಂದ್ಯಾಟಗಳು ಸಹಕಾರಿಯಾಗಲಿ. ಆಟದಲ್ಲಿ ಗೆದ್ದವರು ನಾಯಕನಾದರೆ, ಸೋತವನು ಮಾರ್ಗದರ್ಶಕನಾಗುತ್ತಾನೆ. ಇಬ್ಬರೂ ಸಹ ಸಾಧಕರೇ ಆಗಿರುತ್ತಾರೆ ಎಂದು ಹೆಬ್ರಿಯ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹೆಚ್. ನಾಗರಾಜ ಶೆಟ್ಟಿ ಹೇಳಿದರು.
ಅವರು ಸೋಮವಾರ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆ ನೇತೃತ್ವದಲ್ಲಿ ನಡೆದ ಸಿಬಿಎಸ್ಸಿ- ಐಸಿಎಸ್ಇ ಮಾಧ್ಯಮದ ಅಂತರ್ ಶಾಲೆಗಳ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಗುರುಕುಲ ವಿದ್ಯಾಸಂಸ್ಥೆಯು ಹೆಸರಿಗೆ ತಕ್ಕನಾಗಿಯೇ ಇಲ್ಲಿನ ಕಲಿಕಾ ವಿಧಾನ, ಪರಿಸರವು ಇದೆ. ಇಲ್ಲಿನ ವಾತಾವರಣವೇ ಒಂದು ರೀತಿಯಲ್ಲಿ ಖುಷಿ ಕೊಡುತ್ತಿದೆ. ಆಯೋಜಿಸುವ ಒಂದೊಂದು ಕಾರ್ಯಕ್ರಮವು ವಿಶಿಷ್ಟವಾಗಿರುತ್ತದೆ. ನಮ್ಮ ಪಾರಂಪರಿಕ ಸಂಸ್ಕೃತಿಯ ಬಗೆಗಿನ ಕಾಳಜಿ ಶ್ಲಾಘನೀಯ ಎಂದ ಅವರು, ಈ ಸಂಸ್ಥೆ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಎಲ್ಲರ ಬದುಕಿನಲ್ಲಿಯೂ ಕ್ರೀಡೆ ಬಹಳ ಮುಖ್ಯ. ದೈಹಿಕ, ಮಾನಸಿಕ ಕ್ಷಮತೆ, ಆರೋಗ್ಯ ವೃದ್ಧಿಗೆ ಕಬಡ್ಡಿಯಂತಹ ಕ್ರೀಡೆ ಸಹಕಾರಿ. ನಮ್ಮ ದೇಸಿ ಕ್ರೀಡೆಯಾಗಿರುವ ಕಬಡ್ಡಿಗೂ ಈಗ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಮಕ್ಕಳು, ಸಂಸ್ಥೆಯ ಶಿಕ್ಷಕರು, ಸಿಬಂದಿ ಉಪಸ್ಥಿತರಿದ್ದರು.
೧೫ ಶಾಲೆಗಳು ಭಾಗಿ
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ೧೫ ಸಿಬಿಎಸ್ಸಿ- ಐಸಿಎಸ್ಇ ಶಾಲೆಗಳ ವಿವಿಧ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಗುರುಕುಲ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲ ಮೋಹನ್ ಕೆ. ಸ್ವಾಗತಿಸಿ, ಶಿಕ್ಷಕಿ ಸಂಧ್ಯಾ ವಂದಿಸಿದರು. ಶಿಕ್ಷಕಿ ಸುಜಾತ ಕಿರಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











