ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಭಾರತ ವಿಕಸಿತಗೊಳ್ಳುತ್ತಿದೆ. ಸರ್ವ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಣುತ್ತಿದೆ. ತನ್ನ ವಿಶ್ವಗುರು ಹೆಗ್ಗಳಿಕೆಯನ್ನು ಮರಳಿ ಗಳಿಸುತ್ತಿದೆ. ವಿದೇಶಗಳಲ್ಲಿ ಇಂದು ಭಾರತ ದೇಶ ಮಾತ್ರವಲ್ಲ, ಭಾರತೀಯರಿಗೂ ವಿಶೇಷ ಗೌರವ ಸಿಗುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಪ್ರತಾಪ ಸಿಂಹ ನಾಯಕ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಹನ್ನೊಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬಿ.ಜೆ.ಪಿ ಕುಂದಾಪುರ ಮಂಡಲ ಆಶ್ರಯದಲ್ಲಿ ಕೋಟೇಶ್ವರದಲ್ಲಿ ಮಂಗಳವಾರ ಸಂಜೆ ಜರಗಿದ ವಿಕಸಿತ ಭಾರತ ಸಂಕಲ್ಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
2013ರ ಸಮಯದಲ್ಲಿ ಭಾರತೀಯರೆಲ್ಲರೂ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಚಾರಗಳನ್ನು ಕಂಡು ಬೇಸತ್ತಿದ್ದರು. ಭಾರತಕ್ಕೆ ರಾಜಕೀಯವಾಗಿ ಇನ್ನು ಭವಿಷ್ಯವಿದೆಯೇ ಎಂದು ಚಿಂತಿಸುತ್ತಿದ್ದರು. ಪ್ರತಿ ಯೋಜನೆಯಲ್ಲೂ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರದಲ್ಲಿನ ಮೊತ್ತಗಳಿಗೆ ಎಷ್ಟು ಸೊನ್ನೆ ಬರೆಯಬೇಕು ಎಂಬುದೇ ತೋಚುತ್ತಿರಲಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಜನರು ವಿಶ್ವಾಸ ಕಳೆದುಕೊಂಡಿದ್ದರು. ಆದರೂ ಗುಜರಾತ್ನಲ್ಲಿ 14 ವರ್ಷ ಮುಖ್ಯ ಮಂತ್ರಿಯಾಗಿ, ಆ ರಾಜ್ಯದಲ್ಲಿ ತಂದ ಬದಲಾವಣೆಗಳನ್ನು ಗಮನಿಸಿದ್ದ ಜನತೆ, ಈ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದರೆ, ದೇಶದ ಭವಿಷ್ಯ ಬೆಳಗಬಹುದು ಎಂಬ ಒಂದು ಆಶಾ ಕಿರಣ ಹೊಂದಿದ್ದರು. ಅದೇ ನರೇಂದ್ರ ಮೋದಿ ಪ್ರಧಾನಿಯಾಗಿ ಇಂದು ಭಾರತವನ್ನೇ ಬದಲಿಸಿದ್ದು, ಭಾರತೀಯರು ಮಾತ್ರವಲ್ಲದೆ ವಿಶ್ವವೇ ಹೆಮ್ಮೆ ಪಡುವಂತಾಗಿದೆ. ಕೇಂದ್ರ ಸರ್ಕಾರದ ಅಂತಹ ಮಹಾನ್ ಸಾಧನೆಗಳನ್ನು ಪ್ರತಿ ಕಾರ್ಯಕರ್ತನೂ ಇಂದು ಮನೆಮನೆಗೆ ಸಾರಬೇಕಾಗಿದೆ. 2047 ರ ಭಾರತ ವಿಶ್ವಗುರು ಸಂಕಲ್ಪವನ್ನು ಸಾಕಾರಗೊಳಿಸಲು ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದವರು ಕರೆ ನೀಡಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರಾಜ್ಯ ಸರ್ಕಾರ ಭ್ರಷ್ಟ ಆಡಳಿತದಿಂದ ಜನಜೀವನವನ್ನೇ ದುರ್ಭರಗೊಳಿಸಿದೆ. ಜನರಿಗೆ ಕಾಂಗ್ರೆಸ್ನ ಭ್ರಷ್ಟಚಾರಗಳನ್ನು ಪರಿಚಯಿಸುವುದರೊಂದಿಗೆ ಬಿಜೆಪಿಯ ಒಳ್ಳೆಯ ಆಡಳಿತವನ್ನೂ ನೆನಪಿಸಬೇಕಾಗಿದೆ. ಜೂನ್ 23ರಂದು ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಐದು ಅಂಶಗಳ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಹಾಗೂ ಆಡಳಿತದ ಭ್ರಷ್ಟಚರಣೆಯನ್ನು ವಿಶಿಷ್ಟ ರಿತಿಯಲ್ಲಿ ಆಚರಿಸಿಕೊಂಡ ಬಿಜೆಪಿ ಕಾರ್ಯಕರ್ತ, ರಿಕ್ಷಾ ಚಾಲಕ ಸತೀಶ್ ಪ್ರಭು ಅವರನ್ನು ಸನ್ಮಾನಿಸಲಾಯಿತು. ವಿವಿಧ ಮೋರ್ಚಾಗಳ ವತಿಯಿಂದ ಸತೀಶ್ ಪ್ರಭು ಅವರನ್ನು ಗೌರವಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಸುಧೀರ್, ಶಂಕರ್ ಅಂಕದಕಟ್ಟೆ, ಕುಂದಾಪುರ ಮಂಡಲ ಸಂಚಾಲಕ ಸುನಿಲ್ ಶೆಟ್ಟಿ, ಸಹ ಸಂಚಾಲಕಿ ರೂಪಾ ಪೈ, ರಾಜೇಶ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಸದಾನಂದ ಬಳ್ಕೂರ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪಂಚಾಯತ್ ಸದಸ್ಯರು, ಪುರಸಭೆ, ಪಟ್ಟಣ ಪಂಚಾಯತ್ ಸದಸ್ಯರು, ಬಿಜೆಪಿ ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.











