ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹಂಚು ಕೈಗಾರಿಕೆಗೆ ಅಗತ್ಯವಿರುವ ಆವೆ ಮಣ್ಣು, ನಿರ್ಮಾಣ ಉದ್ಯಮಕ್ಕೆ ಅಗತ್ಯವಿರುವ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆ ಪರಿಹರಿಸಲು ಒತ್ತಾಯಿಸಿ ವಿವಿಧ ವಿಭಾಗದ ಕಾರ್ಮಿಕರು ಕುಂದಾಪುರ ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮುಖಾಂತರ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಿ. ಹಂಚು ಮತ್ತು ಕಟ್ಟಡ ನಿರ್ಮಾಣ ಉದ್ಯೋಗ ನಂಬಿ ಬದುಕುತ್ತಿರುವ ಸಹಸ್ರಾರು ಕುಟುಂಬಗಳ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬ್ರಹ್ಮಾವರದಲ್ಲಿ ಸ್ಥಾಪಿಸಲು ಉದ್ದೇಶಿಸಿದ ಇಎಸ್ಐ ಆಸ್ಪತ್ರೆ ಶೀಘ್ರ ನಿರ್ಮಾಣ , ಬೀಡಿ ಕಾರ್ಮಿಕರಿಗೆ 2018 ರಿಂದಲೂ ಬಾಕಿ ಇರುವ ಕನಿಷ್ಠ ಕೂಲಿ ತುಟ್ಟಿಭತ್ಯೆ ಬಿಡುಗಡೆ ಗೊಳಿಸುವಂತೆ, ಪ್ರಾವಿಡೆಂಟ್ ಫಂಡ್ ಯೋಜನೆಗೆ ಸೇರ್ಪಡೆಗೊಳ್ಳುವ ಆದಾಯ ಮಿತಿ 36000 ಕ್ಕೆ ಹೆಚ್ಚಿಸಲು, ಸಾರಿಗೆ ಕಲ್ಯಾಣ ಮಂಡಳಿಗೆ ಅನುದಾನ ಬಿಡುಗಡೆಗೊಳಿಸಲು, ಕಟ್ಟಡ ಕಾರ್ಮಿಕರ 1996 ಕಾನೂನು ಉಳಿಸಿಕೊಳ್ಳುವಂತೆ, ಕಲ್ಯಾಣ ಮಂಡಳಿ ನಿಧಿ ದುರುಪಯೋಗ ತಡೆಗಟ್ಟುವಂತೆ, ಅಂಗನವಾಡಿ ಕೇಂದ್ರದಲ್ಲಿ F R S ಕೈಬಿಡುವಂತೆ ಒತ್ತಾಯಿಸಿದರು.
ಸಭೆಯನ್ನುದ್ದೇಶಿಸಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ ಅಧ್ಯಕ್ಷರಾದ ವಿ. ನರಸಿಂಹ, ಕಟ್ಟಡ ಸಂಘದ ಗೌರವ ಅಧ್ಯಕ್ಷರಾದ ಚಿಕ್ಕಮೊಗವೀರ, ಬೀಡಿ ಕಾರ್ಮಿಕ ಸಂಘದ ಮಹಾಬಲ ವಡೇರಹೋಬಳಿ ಮಾತನಾಡಿದರು.
ಹಂಚು ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ನರಸಿಂಹ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು ಸುರೇಂದ್ರ ಧನ್ಯವಾದ ಅರ್ಪಿಸಿದರು.ಕಾರ್ಯಕ್ರಮದ ನೇತೃತ್ವವನ್ನು ಹಂಚು ಸಂಘದ ಪದಾಧಿಕಾರಿಗಳಾದ ಪಂಜು ಜಿ ಡಿ, ವಾಸು, ಚಂದ್ರ ಪೂಜಾರಿ, ಆನಂದ್ ಶೆಟ್ಟಿ , ಕಟ್ಟಡ ಸಂಘದ ರತ್ನಾಕರ್ ಆಚಾರ, ರಾಜ ಬಿಟಿಆರ್. ವಹಿಸಿದ್ದರು.











