ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಳೆದ 24 ವರ್ಷದಿಂದ ಮಕ್ಕಳಿಗೆ, ಮಹಿಳೆಯರಿಗೆ, ಆಸಕ್ತಿರಿಗೆ ಯಕ್ಷಗಾನವನ್ನು ಕಲಿಸುವುದರಲ್ಲಿ ನಿರತರಾಗಿ, ಅಲ್ಲಲ್ಲಿ ಯಕ್ಷಗಾನ ಪ್ರದರ್ಶನ, ಪ್ರಾತ್ಯಕ್ಷಿಕೆ, ಯಕ್ಷಗಾನ ಉತ್ಸವ ಹೀಗೆ ಹಲವು ಕಾರ್ಯಕ್ರಮ ನೀಡುವ ಮೂಲಕ ಸದಾ ಚಟುವಟಿಕೆಯಿಂದಿರುವ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ನವರು ಜ.17ರಂದು ಸಂಜೆ 5.30ಕ್ಕೆ ಉಡುಪಿಯ ಕೋಟದ ಹಂದೆ ಶ್ರೀ ಮಹಾಗಣಪತಿ, ಮಹಾವಿಷ್ಣು ದೇವಸ್ಥಾನದ ನಾಗಪ್ಪಯ್ಯ ಹಂದೆ ರಂಗಮಂದಿರದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವರ ವಾರ್ಷಿಕ ಅವಭೃತೋತ್ಸವದ ಪ್ರಯುಕ್ತ ಯುವ ಕಲಾವಿದ ಆದಿತ್ಯ ಹೆಗಡೆ ವಿರಚಿತ “ಮಿತ್ರ ವಿಂದಾ ಪರಿಣಯ” ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪ್ರದರ್ಶನದ ಉದ್ಘಾಟನೆಯನ್ನು ಯಕ್ಷಗಾನ ಪ್ರೋತ್ಸಾಹಕರಾದ ಜನಾರ್ದನ ಹಂದೆಯವರು ಮಾಡಲಿದ್ದು, ನಮ್ಮೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಾರಾನಾಥ ಹೊಳ್ಳ ಕಾರ್ಕಡ, ಹಂದೆ ಶ್ರೀ ಮಹಾಗಣಪತಿ, ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಮರ ಹಂದೆಯವರು ಭಾಗವಹಿಸಲಿದ್ದಾರೆ. ಅಂದು ನಡೆಯುವ “ಮಿತ್ರ ವಿಂದಾ ಪರಿಣಯ” ಪ್ರಸಂಗದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ, ಚಂಡೆಯಲ್ಲಿ ಶಿವಾನಂದ ಕೋಟ, ಸುದೀಪ ಉರಾಳ, ಮುಮ್ಮೇಳದಲ್ಲಿ ತಮ್ಮಣ್ಣ ಗಾಂವ್ಕರ್, ಶಶಾಂಕ ಪಟೇಲ್, ರಾಘವೇಂದ್ರ ತುಂಗ, ಆದಿತ್ಯ ಹೆಗಡೆ, ಸ್ಫೂರ್ತಿ ಭಟ್, ಅಬ್ದುಲ್ ರವೂಫ್, ನರಸಿಂಹ ತುಂಗ ಇನ್ನೀತರರೂ ಭಾಗವಹಿಸಲಿದ್ದಾರೆಂದು ಯಕ್ಷಾಂಗಣ ಟ್ರಸ್ಟ್ನ ಮೇನೆಜಿಂಗ್ ಟ್ರಸ್ಟಿಯಾದ ವೀಣಾ ಮೋಹನ್ರವರು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











