ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳು ಬೇಗನೆ ಮರೆಯಾಗುತ್ತಿದೆ. ಹಿರಿಯರು ಇಟ್ಟ ಹೆಜ್ಜೆಗಳ ಆಧಾರದ ಮೇಲೆ ನಮ್ಮ ಜೀವನ ರೂಪಿಸಿಕೊಳ್ಳಬೇಕು. ಜನಪದದ ಜೀವನ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಮನುಷ್ಯನ ಅಹಂಕಾರ ಮತ್ತು ಸ್ವಾರ್ಥ ಜಗತ್ತಿನಲ್ಲಿ ವಿಕೃತಿ ಸೃಷ್ಟಿಸುತ್ತಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.

ರವಿವಾರ ಮರವಂತೆಯ ಶ್ರೀ ವರಾಹ ಮಹಾರಾಜ ಸ್ವಾಮಿ ಹಾಗೂ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಸಮೀಪ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಯುವ ಬ್ರಿಗೇಡ್ ಬೆಂಗಳೂರು, ಕರಾವಳಿ ವಿಭಾಗೀಯ ಘಟಕ ಮರವಂತೆ ಹಾಗೂ ಲಯನ್ಸ್ ಕ್ಲಬ್ ಕೋಸ್ಟಲ್ ಕುಂದಾಪುರದ ಸಹಕಾರದೊಂದಿಗೆ ಆಯೋಜಿಸಿದ ರಾಜ್ಯ ಮಟ್ಟದ ಜಲಜಾನಪದೋತ್ಸ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಜಾನಪದ ಕಲಾವಿದರ ಮಾಸಾಸನ ಹೆಚ್ಚಳ ಮಾಡುವ ಬಗ್ಗೆ ಇಲಾಖೆ ಸಚಿವರಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಸುಮರು 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮರವಂತೆಯನ್ನು ಪ್ರಸಿದ್ಧ ಪ್ರವಾಸಿತಾಣವನ್ನಾಗಿ ಮಾಡುವ ಮತ್ತು ಮರವಂತೆಯಲ್ಲಿ ಮರವಂತೆ ಉತ್ಸವ ನಡೆಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿದೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿ, ಸಂಗೀತ, ಕಲೆ, ಕ್ರೀಡೆ ಮೊದಲಾದವುಗಳಲ್ಲಿ ಆಸಕ್ತಿ ಇದ್ದರೆ ಮಾತ್ರ ಮನುಷ್ಯನಾಗಿ ಬಾಳಲು ಮತ್ತು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಜಾನಪದ ಕಲಾವಿದರಿಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ ದೊರೆಯುತ್ತಿಲ್ಲ. ಜಾನಪದ ಕಲಾವಿದರು ತುಂಬಾ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಜಾನಪದ ಕಲೆಗಳ ಬಗ್ಗೆ ಸರಕಾರ ಹೆಚ್ಚಿನ ಆಸಕ್ತಿ ವಹಿಸಿ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಹೇಳಿದರು.
ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾ| ಗಣೇಶ ಕಾರ್ಣಿಕ್, ಕಾಪು ಶಾಸಕ ಲಾಲಾಜಿ ಮೆಂಡನ್, ಲಯನ್ಸ್ ಕ್ಲಬ್ ಗವರ್ನರ್ ಎಚ್.ವಿಶ್ವನಾಥ ಶೆಟ್ಟಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ ರೈ ಸೂಡಿಮುಳ್ಳು, ಉಡುಪಿ ಜಿಲ್ಲೆ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ಜಯಾನಂದ ಹೋಬಳಿದಾರ್, ಉದ್ಯಮಿ ರಾಜಶೇಖರ್ ಹೆಬ್ಬಾರ್, ಶೇಖರ್, ಕನ್ನಡ ಜಾನಪದ ಪರಿಷತ್ ಜಾನಪದ ಯುವಬ್ರಿಗೇಡ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಪ್ರೊ. ಕನರಾಡಿ ವಾದಿರಾಜ ಭಟ್, ಜಯಶೀಲ ಶೆಟ್ಟಿ, ರವಿ ಮಡಿವಾಳ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷೆ ಡಾ.ನಿಕೇತನ ಸ್ವಾಗತಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಮತ್ತು ರಾಘವೇಂದ್ರ ಕಾಂಚನ್ ಮರವಂತೆ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಜಾನಪದ ಪರಿಷತ್ ಕರಾವಳಿ ವಿಭಾಗದ ಸಂಚಾಲಕಿ ಡಾ.ಭಾರತಿ ಮರವಂತೆ ವಂದಿಸಿದರು.











