ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಿಜೆಪಿ ಸರಕಾರ ಕಮಿಷನ್ ಸರಕಾರವಾಗಿದೆ. ಇಂತ ಕೆಲಸಕ್ಕೆ ಇಂತಿಷ್ಟು ಎಂಬ ದರಪಟ್ಟಿ ನಿಗದಿಪಡಿಸಿ ಕೆಲಸ ಮಾಡುತ್ತಿದ್ದಾರೆ. ಈ ಸರಕಾರದಿಂದ ಒಳಿತನ್ನು ಬಯಸಲು ಆಗಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಲೇವಡಿ ಮಾಡಿದ್ದಾರೆ.
ಹೆಮ್ಮಾಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರ 40% ಕಮಿಷನ್ ಪಡೆಯುವ ಬಗ್ಗೆ ಕೆಂಪಣ್ಣ ಎನ್ನುವರು ಪ್ರಧಾನಿಯವರಿಗೆ ಪತ್ರ ಬರೆದು ವರ್ಷ ಕಳೆದಿದೆ. ಕೂಡ ಪ್ರಧಾನಮಂತ್ರಿ ಕಾರ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಿಂದಿನ ಪ್ರಧಾನಿಯವರಿಗೆ ಮೌನ ಮುರಿಯಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ ಈಗಿನ ಪ್ರಧಾನಿಯವರ ಮೌನದಿಂದ ಇರುವುದು ಅವರು ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಒಪ್ಪಿದಂತಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ದೂರಿದರು.
ಹಿಂದೆ ಪ್ರಧಾನಿಯವರು ಕರ್ನಾಟಕಕ್ಕೆ ಬಂದಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರಕಾರ ಎಂದು ರಾಜಕೀಯವಾಗಿ ಲೇವಡಿ ಮಾತನಾಡಿದ್ದರು. ಆದರೆ ಈಗ ಜನರು, ಗುತ್ತಿಗೆದಾರರು ಸರಕಾರದ ಬಗ್ಗೆ ಪರ್ಸೆಂಟ್ ವಿಚಾರದ ಲೇವಡಿ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ 40 ಶೇಖಡಾ ಕಮಿಷನ್ ಆರೋಪಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದಿದ್ದಾರೆ. ಮಠಾಧೀಶರೊಬ್ಬರು ಕೂಡ ಮೂವತ್ತು ಶೇಖಡಾ ಕಮಿಷನ್ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದರು.
ಜಾತಿಗಳ ಮಧ್ಯೆ, ಕೋಮುಗಳ ಮಧ್ಯೆ ಕಂದಕ ನಿರ್ಮಾಣ ಮಾಡಿ ಅದರಿಂದ ಉಪಯೋಗ ಪಡೆಯಲಾಗುತ್ತಿದೆ. ಬಿಜೆಪಿಯವರು ಮಾತ್ರ ದೇಶ ಭಕ್ತರಲ್ಲ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರು ದೇಶ ಭಕ್ತರು. ಅವರು ವಿಭಜನೆ ಮಾಡಿದ್ದು ನಾವೇನು ಎದೆ ಬಗೆದು ರಾಷ್ಟ್ರ ಭಕ್ತಿ ಬಗ್ಗೆ ತೋರಿಸಲು ಆಗುವುದಿಲ್ಲ. ಕೋಮು ಭಾವನೆಗೆ ಜನರು ಬೆಲೆ ನೀಡಬಾರದು ಎಂದು ಮಂಜುನಾಥ್ ಭಂಡಾರಿ ಹೇಳಿದರು.











