ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಸಂಸ್ಥಾಪಕ ದಿ. ಯಡ್ತರೆ ಮಂಜಯ್ಯ ಶೆಟ್ಟರ ವಿಚಾರಗೋಷ್ಠಿಯಿಂದಾಗಿ ಅವರ ಸಾಧನೆ, ನಡೆದು ಬಂದ ಹಾದಿಯ ಬಗ್ಗೆ ತಿಳಿಸುವ ಪ್ರಯತ್ನ ಶ್ಲಾಘನೀಯ. ಮೂರು ಅವಧಿಯಲ್ಲಿ ಶಾಸಕರಾಗಿದ್ದು, ನಮ್ಮಂತಹ ರಾಜಕಾರಣಿಗಳೆಲ್ಲರಿಗೂ ಅವರು ಮಾದರಿ. ಅವಕಾಶವಿದ್ದರೂ, ರಾಜಕೀಯದಿಂದ ನಿವೃತ್ತಿಯಾಗಿ ಇತರರಿಗೆ ಮಾದರಿಯಾದ ಅಪರೂಪದ ರಾಜಕಾರಣಿಗಳಲ್ಲಿ ಯಡ್ತರೆ ಮಂಜಯ್ಯ ಶೆಟ್ಟರು ಸಹ ಒಬ್ಬರು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್ಚಂದ್ರ ಶೆಟ್ಟಿ ಹೇಳಿದರು.

ಅವರು ಶನಿವಾರ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರ ಮಹೋತ್ಸವ ಸಮಾರಂಭದಲ್ಲಿ ಯಡ್ತರೆ ಮಂಜಯ್ಯ ಶೆಟ್ಟಿ ವಿಚಾರ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಅವರ ನಡೆ, ನುಡಿ, ಆಚಾರ ವಿಚಾರಗಳು ಪ್ರತುತ ರಾಜಕಾರಣಿಗಳಿಗೆ ಮಾದರಿ. 40 ವರ್ಷಗಳ ಕಾಲ ಕೊಲ್ಲೂರಿನ ಆಡಳಿತ ಧರ್ಮದರ್ಶಿಯಾಗಿ ಸೇವೆ ಸಲ್ಲಿಸಿರುವುದು ಸಣ್ಣ ವಿಚಾರವಲ್ಲ. ರಾಜಕೀಯ, ಸಾಮಾಜಿಕ, ಶಿಕ್ಷಣ, ಧಾರ್ಮಿಕ, ಸಹಕಾರಿ, ಶಾಸಕನಾಗಿ ಜವಾಬ್ದಾರಿಯನ್ನು ಅರಿತು, ತಾನು ಮಾಡಬೇಕಾದ ಕೆಲಸವನ್ನು ತನ್ನ ಚಿಂತನೆಯ ನೆಲೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಸಂಘ-ಸಂಸ್ಥೆಗಳನ್ನು ಕಟ್ಟಿದ್ದಾರೆ. ಬೈಂದೂರು, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದಾರೆ ಎಂದರು.
ಯಡ್ತರೆ ಅವರು ಎರಡು ಜಿಲ್ಲೆಗಳಲ್ಲೂ ಪ್ರಭಾವಿ ನಾಯಕರಾಗಿದ್ದರು. ಬ್ಯಾಂಕ್ಗಳ ಪರಿಚಯವೇ ಕಡಿಮೆಯಿದ್ದ ಕಾಲದಲ್ಲಿ ಜನರ ಅನುಕೂಲಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಿದವರು ಯಡ್ತರೆ ಅವರು. ಸಹಕಾರಿ ಸುಧಾರಣೆಗೆ ಶ್ರಮಿಸಿದ ಅನೇಕ ಮಹನೀಯರಲ್ಲಿ ಇವರೂ ಒಬ್ಬರು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಯಡ್ತರೆ ಮಂಜಯ್ಯ ಶೆಟ್ಟರು ವಂಡ್ಸೆ, ಕಂಬದಕೋಣೆ ಪ್ರೌಢಶಾಲೆ, ಮೆಟ್ಟಿನಹೊಳೆಯಂತಹ ಗ್ರಾಮೀಣ ಭಾಗದಲ್ಲಿ ಹಿ.ಪ್ರಾ. ಶಾಲೆಗಳನ್ನು ಆರಂಭಿಸಿದ್ದಾರೆ. ಕೊಲ್ಲೂರು ದೇಗುಲದ ಅಭಿವೃದ್ಧಿಗೆ ಕೊಡುಗೆ ನೀಡಿದ್ದು, ಅವರ ನಡೆ, ನುಡಿ ಎಲ್ಲರಿಗೂ ಅನುಕರಣೀಯ. ರಾಜಕೀಯವಾಗಿ ಜಿ.ಎಸ್.ಆಚಾರ್, ಎ.ಜಿ. ಕೊಡ್ಗಿಯಂತವರಿಗೆ ಮಾರ್ಗದರ್ಶನ ನೀಡಿದವರು ಎಂದು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಬೈಂದೂರು ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಶತ್ರುಗಳೇ ಇಲ್ಲದ ರಾಜಕಾರಣಿ ಅವರಾಗಿದ್ದರು. ಅವರ ಸಿದ್ಧಾಂತ, ತತ್ವಗಳು, ಎಲ್ಲ ವರ್ಗದ ಜನರನ್ನು ಪ್ರೀತಿಸುವ ಅವರ ಗುಣ ಅನುಕರಣೀಯ ಎಂದರು.
ಸಂಘದ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಚ್. ಶೋಭಕೃಷ್ಣ, ನಿರ್ದೇಶಕರಾದ ಮೋಹನ್ದಾಸ್ ಶೆಟ್ಟಿ, ಕೆ. ಸುಧಾಕರ ಶೆಟ್ಟಿ ಬಾಂಡ್ಯ, ಆನಂದ ಬಿಲ್ಲವ, ಕೆ. ಭುಜಂಗ ಶೆಟ್ಟಿ, ಕೆ. ಮೋಹನ್ ಪೂಜಾರಿ, ಪ್ರಭಾಕರ ಶೆಟ್ಟಿ, ರವಿ ಗಾಣಿಗ, ಎಚ್. ದೀನ್ಪಾಲ್ ಶೆಟ್ಟಿ, ಎಚ್. ಚಂದ್ರಶೇಖರ್ ಶೆಟ್ಟಿ, ಎಸ್.ಜಯರಾಮ ಶೆಟ್ಟಿ, ಪಿಎಲ್ಡಿ ಬ್ಯಾಂಕ್ ಅ‘ಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಯಡ್ತರೆ ಹೌಸ್ನ ಎಂ. ಅಶೋಕ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ನಿರ್ದೇಶಕ ಎಸ್. ರಾಜು ಪೂಜಾರಿ ಪ್ರಸ್ತಾವಿಸಿ, ಮಹೇಶ್ ಹೆಗ್ಡೆ ಮೊಳಹಳ್ಳಿ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ, ಆರ್.ಜೆ. ನಯನಾ ನಿರೂಪಿಸಿದರು.











