Category: ಸುದ್ದಿ

  • ಕೋಟ ಗಾಣಿಗ ಯುವ ಸಂಘಟನೆ: ಯುವಸಂಗಮ ಕಾರ್ಯಕ್ರಮ

    ಕೋಟ ಗಾಣಿಗ ಯುವ ಸಂಘಟನೆ: ಯುವಸಂಗಮ ಕಾರ್ಯಕ್ರಮ

    ಇತರ ಸಮಾಜಕ್ಕೆ ಮಾದರಿ ಸಮುದಾಯವಾಗಿ ಗಾಣಿಗ ಸಮುದಾಯ ರೂಪುಗೊಂಡಿದೆ – ಸೂರ್ಯನಾರಾಯಣ ಗಾಣಿಗ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಗಾಣಿಗ ಯುವಸಂಘಟನೆ ಕೋಟ ಘಟಕ ಮತ್ತು ಮಹಿಳಾ ಸಂಘಟನೆ ಆಶ್ರಯದಲ್ಲಿ, ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ, ಶೈಕ್ಷಣಿಕ ಪರಿಕರ ವಿತರಣೆ ಕಾರ್ಯಕ್ರಮ ಯುವಸಂಗಮ ಜು.2ರಂದು ಕಾರ್ತತಟ್ಟು ಅಘೋರೇಶ್ವರ ಸಭಾಭವನದಲ್ಲಿ ಜರಗಿತು.

    ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘಟನೆಯ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಣ ಅತೀ ಅಗತ್ಯ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಹೆತ್ತವರ ಕರ್ತವ್ಯವಾಗಿದೆ. ಯುವ ಸಾಧಕರನ್ನು ಗುರುತಿಸಿ ಸಮ್ಮಾನಿಸುವ ಕೋಟ ಯುವಸಂಘಟನೆಯ ಕಾರ್ಯ ಶ್ಲಾಘನೀಯ ಎಂದರಲ್ಲದೆ ಗಾಣಿಗ ಸಮುದಾಯ ಇತರ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
    ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ. ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.

    ಸಂಘಟನೆಯ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಸಭಾಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭ ಕ್ರೀಡಾವಿಭಾಗದಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಸೌಜನ್ ಕುಮಾರ್ ಸಾಲಿಗ್ರಾಮ, ದಿನೇಶ್ ಗಾಣಿಗ ಕೋಟ ಹಾಗೂ ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಗಾಣಿಗ ಚಿತ್ರಪಾಡಿ ಅವರನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿ, ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಕೊಡೆ, ವಾಟರ್‍ಬಾಟಲ್‍ಗಳನ್ನು ವಿತರಿಸಲಾಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.

    ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘಟನೆಯ ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಗಾಣಿಗ ಯುವ ಸಂಘಟನೆ ಕೋಟದ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಗಣೇಶ್ ಚಿತ್ರಪಾಡಿ, ಯುವ ಸಂಘಟನೆ ಬಾರ್ಕೂರು ಅಧ್ಯಕ್ಷ ಬಾಲಕೃಷ್ಣ ಗಾಣಿಗ, ಗಾಣಿಗ ಸಮಾಜದ ವಿವಿಧ ವಲಯಗಳ ಅಧ್ಯಕ್ಷರುಗಳಾದ ಬ್ರಹ್ಮಾವರದ ಉದಯ ಕುಮಾರ್, ಉದ್ಯಾವರದ ಚಂದ್ರಶೇಖರ್ ಗಾಣಿಗ, ಬಾರ್ಕೂರಿನ ಬಾಲಕೃಷ್ಣ ಗಾಣಿಗ, ಕೆಮ್ಮಣ್ಣಿನ ಸತೀಶ್ ಕೆಮ್ಮಣ್ಣು, ತೆಂಕನೆಡಿಯೂರಿನ ಶಂಕರ ಗಾಣಿಗ, ಉಡುಪಿ ವಲಯದ ಜಯರಾಮ ಗಾಣಿಗ ಉಪಸ್ಥಿತರಿದ್ದರು.

    ಯುವ ಸಂಘಟನೆಯ ಖಜಾಂಚಿ ಆನಂದ ಗಾಣಿಗ ಮಾಬುಕಳ ಸ್ವಾಗತಿಸಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗಾಣಿಗ ಪ್ತಾಸ್ತಾವಿಕ ಮಾತನಾಡಿದರು. ಮಹಿಳಾ ಸಂಘದ ಕಾರ್ಯದರ್ಶಿ ಕಲಾ ನಟರಾಜ ಗಾಣಿಗ ಮಾಬುಕಳ, ಖಜಾಂಚಿ ಶಾರದಾ ದಿನೇಶ್ ಗಾಣಿಗ ಸಾಧಕರನ್ನು ಪರಿಚಯಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ರಾಜೇಶ್ ಗಾಣಿಗ, ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮ ನಿರೂಪಿಸಿ, ಸಂಘಟನೆಯ ಕಾರ್ಯದರ್ಶಿ ಆರ್.ಕೆ. ಬ್ರಹ್ಮಾವರ ವಂದಿಸಿದರು.

  • ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ

    ಕುಂದಾಪುರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ

    ಕುಂದಾಪುರ ಮಿರರ್ ಸುದ್ದಿ…

    Video:

    ಕುಂದಾಪುರ: ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಮುಷ್ಕರ ನಡೆಸಿತು.

    ನಾವು ಸತತ 48 ವರ್ಷಗಳಿಂದ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿದ್ದು ಈವರೆಗೂ ಯಾವುದೇ ಭದ್ರತೆಗಳಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿ ಇದ್ದೇವೆ. ಸರಕಾರ ನಮ್ಮನ್ನು ಖಾಯಂ ನೌಕರರಾಗಿ ಮಾಡಿದರೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಎಲ್ಲಾ ಸಮಸ್ಯೆ ಏಕಕಾಲದಲ್ಲಿ ಬಗೆಹರಿಸಬಹುದು. ನಮಗೆ ಕನಿಷ್ಠ ಕೂಲಿ 21,000 /-ರೂ ಜಾರಿ ಮಾಡಲೇಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
    ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ರಾಜ್ಯಾದ್ಯಂತ ಆರೋಗ್ಯ ಪೌಷ್ಠಕ ಸಮೀಕ್ಷೆ ನಡೆಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಅಧಿಕಾರಿಗಳು ಒತ್ತಾಯಿಸುವುದನ್ನು ನಿಲ್ಲಿಸಬೇಕು. ನಾವು ಯಾವುದೇ ಕಾರಣಕ್ಕೂ ಸರ್ವೇ ಮಾಡುವುದಿಲ್ಲ, ಇಲಾಖಾ ಅಧಿಕಾರಿಗಳು ಸರ್ವೇ ಮಾಡದೆ ಇದ್ದಲ್ಲಿ ಗೌರವ ಧನ ತಡೆಯಿಡಿಯುವ ಆದೇಶವನ್ನು ಮಾಡಿದ್ದಾರೆ. ತಕ್ಷಣ ಆ ಆದೇಶವನ್ನು ಹಿಂಪಡೆಯಬೇಕು ಎಂದು ಮುಷ್ಕರ ನಿರತರು ಸರ್ಕಾರವನ್ನು ಒತ್ತಾಯಿಸಿದರು.

    ಈಗಾಗಲೇ ಹಿಂದಿನ ಸರಕಾರ ನಮಗೆ ಸರ್ವೇ ಮಾಡಲು ಇಲಾಖೆಯಿಂದ ಆದೇಶಿಸಲಾಗಿತ್ತು. ಆದರೆ ಹೆಚ್ಚಿನ ಅಂಗನವಾಡಿ ಕಾರ್ಯಕತೆಯರು ಬಿ.ಎಲ್.ಒ ಆಗಿರುವುದರಿಂದ ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರಣಕ್ಕೆ ಹಾಗೂ ನೀತಿಸಂಹಿತೆ ಜಾರಿ ಆಗಿರುವುದರಿಂದ ಆದೇಶವನ್ನು ಮುಂದೂಡಲಾಗಿತ್ತು. ಆದರೆ ಪುನಃ ನಮಗೆ ಸರ್ವೇ ಮಾಡಲು ಆದೇಶ ಮಾಡಲಾಗಿದೆ ಆದರೆ ಜೂನ್ ತಿಂಗಳಲ್ಲಿ 3 ವರ್ಷದ ಅತಿ ಚಿಕ್ಕ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾದಗ ತುಂಬಾ ಜಾಗೃತೆಯಿಂದ ಆ ಮಕ್ಕಳನ್ನು ನಿಭಾಹಿಸಬೇಕಾಗಿರುತ್ತದೆ. 01 ತಿಂಗಳ ಕಾಲ ಈ ಸರ್ವೇಯನ್ನೂ ಮಾಡಬೇಕಾಗಿ ಆದೇಶ ಮಾಡಿದ್ದು ನಾವು ಅಷ್ಟೂ ದಿನ ಹೊರಗಡೆ ಇದ್ದಲ್ಲಿ ಅಂಗನವಾಡಿ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಅದಲ್ಲದೇ ನಮಗೆ ನೀಡಿದಂತಹ ಮೊಬೈಲ್‍ಗಳು ಹಾಳಾಗಿದ್ದು ವೈಯುಕ್ತಿಕ ಮೊಬೈಲ್‍ನಲ್ಲಿ ಸರಕಾರಿ ಅ್ಯಪ್‍ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ.

    ಅಂಗನವಾಡಿ ಫ್ರಾರಂಭಿಕ ಹಂತದಲ್ಲಿ ಆರೋಗ್ಯ ಇಲಾಖೆ ಮತ್ತು ನಮ್ಮ ಇಲಾಖೆ ನಿರ್ವಹಿಸಲು ಯೋಜನೆ ಪ್ರಾರಂಭ ಮಾಡಲಾಗಿತ್ತು. ಚುಚ್ಚು ಮದ್ದು ಆರೋಗ್ಯ ತಪಾಸಣಾ ಕೆಲಸಗಳನ್ನು ನಾವು ನಿರ್ವಹಿಸುತ್ತಿದ್ದೇವು. ಆದರೆ ಈಗಾ 8 ವರ್ಷಗಳಿಂದ ಆರೋಗ್ಯ ಇಲಾಖೆಯ ಕೆಲಸಗಳನ್ನು ನಿರ್ವಹಿಸಲು ಆಶಾ ಕಾರ್ಯಕರ್ತೆಯರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅವರಿಗೆ ಭತ್ಯೆಯನ್ನು ನೀಡುತ್ತಾರೆ. ನಾವು ಎರಡು ಇಲಾಖೆಯ ಕೆಲಸ ನಿರ್ವಹಿಸಿದರೂ ನಮಗೆ ಯಾವುದೇ ಭತ್ಯೆಗಳಿಲ್ಲ. ಇನ್ನೂ ಮುಂದೆ ಆರೋಗ್ಯ ಇಲಾಖೆಯ ಯಾವುದೇ ಸರ್ವೇಗಳಿದ್ದರೂ ಆಶಾ ಕಾರ್ಯಕರ್ತೆಯರಿಗೆ ನೀಡಿ ನಮಗೆ ಅಂಗನವಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ರಾಜ್ಯದ ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು, ಜಿಲ್ಲಾಧಿಕಾರಿಗಳಿಗೆ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಅವರ ಮೂಲಕ ಮನವಿ ಸಲ್ಲಿಸಲಾಯಿತು

    ಅಂಗನವಾಡಿ ಕಾರ್ಯಕರ್ತೆಯರಿಗೆ ಕೆಲವೊಂದು ಮೇಲ್ವಿಚಾರಕರು ವೈಯಕ್ತಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಅವರನ್ನು ಕೂಡಲೆ ವರ್ಗವಣೆ ಮಾಡಬೇಕು.
    ಗೌರವ ಧನ ನೀಡುವಾಗ ಪ್ರತಿ ತಿಂಗಳು 05ನೇ ತಾರೀಕಿನೋಳಗೆ ನೀಡಬೇಕು,
    ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಮೊಟ್ಟೆ ಟೆಂಡರ್‍ನ್ನು ರದ್ದುಗೊಳಿಸಿ ಪ್ರತಿ ತಿಂಗಳು ಮೊಟ್ಟೆ ಹಣವನ್ನು ಬಾಲವಿಕಾಸ ಸಮಿತಿಯ ಖಾತೆಗೆ ಜಮಾ ಮಾಡಬೇಕು,
    ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆ ನಡೆಸಲು ಅಧಿಕಾರಿಯವರಿಗೆ ಸೂಚಿಸಬೇಕೆಂದು ಜಿಲ್ಲಾಧಿಕಾರಿ, ಉಪನಿರ್ದೇಶಕರು .ಮ.ಮ.ಆ.ಇಲಾಖೆ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯ ಸಂಘ ದ ಜಿಲ್ಲಾಧ್ಯಕ್ಷೆ ಪಿಲೋಮಿನಾ, ಜಿಲ್ಲಾ ಕಾರ್ಯದರ್ಶಿ ಬೇಬಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

  • ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ (CBSE) ಕೋಡಿ : ಶಿಕ್ಷಕ – ರಕ್ಷಕ ಸಭೆ

    ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ (CBSE) ಕೋಡಿ : ಶಿಕ್ಷಕ – ರಕ್ಷಕ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ (CBSE) ಕೋಡಿ ಇಲ್ಲಿ ಶೈಕ್ಷಣಿಕ ವರ್ಷ 2023 – 24 ರ ಪ್ರಥಮ ಶಿಕ್ಷಕ ರಕ್ಷಕ ಸಭೆಯು ಶನಿವಾರದಂದು ಹಮ್ಮಿಕೊಳ್ಳಲಾಯಿತು. ಈ ಸಭೆಯ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಕೆ. ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಯವರು ವಹಿಸಿಕೊಂಡಿದ್ದರು. ಪ್ರಾಂಶುಪಾಲರಾದ ಅಶ್ವಿನಿ ಶೆಟ್ಟಿ ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯ ಕುರಿತಂತೆ ಪ್ರಾಸ್ತವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಂಪನ್ಮೂಲ ವ್ಯಕ್ತಿ ಸೌಜನ್ಯ ಶೆಟ್ಟಿ ಕೌನ್ಸಿಲರ್ ಹಾಗೂ ಆಡಳಿತ ಅಧಿಕಾರಿ,ಡಾ. ಎ. ವಿ.ಬಾಳಿಗ ಮೆಮೋರಿಯಲ್ ಆಸ್ಪತ್ರೆ ಉಡುಪಿ,ಇವರು ಪೋಷಕರನ್ನು ಉದ್ದೇಶಿಸಿ “ಮಕ್ಕಳ ಭೌತಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರ ಜವಾಬ್ದಾರಿ ಕುರಿತು ಮಹತ್ವದ ಮಾಹಿತಿ ಯನ್ನು ನೀಡಿದರು”.

    ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಸೈಯದ್ ಮೊಹಮ್ಮದ್ ಬ್ಯಾರಿಯವರು “ಬದಲಾಗುತ್ತಿರುವ ಈ ಜಗತ್ತಿನಲ್ಲಿ ಬದುಕು ಸಾರ್ಥಕತೆಯ ಕಡೆಗೆ ಸಾಗಬೇಕಾದರೆ ಸೃಷ್ಟಿ ಹಾಗೂ ಸೃಷ್ಟಿ ಕರ್ತನ ಅನುಬಂಧ ಬಹಳ ಪ್ರಮುಖವಾದದ್ದು. ಒಂದು ಶಿಕ್ಷಣ ಸಂಸ್ಥೆಗೆ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಇವು ನಾಲ್ಕು ಆಧಾರ ಸ್ಥಂಭಗಳಿದ್ದಂತೆ.ಇವುಗಳೆಲ್ಲವುದರ ಸಹಭಾಗಿತ್ವದಿಂದ ಮಾತ್ರ ಒಂದು ಉತ್ತಮ ಶಿಕ್ಷಣ ಸಂಸ್ಥೆ ರೂಪುಗೊಳ್ಳುತ್ತದೆ “ಎಂಬ ಸಂದೇಶ ವನ್ನು ನೀಡಿದರು.

    ಶಾಲಾ ವಿದ್ಯಾರ್ಥಿ ಗಳ ತಂಡ ಶಾಲೆ ಹಾಗೂ ಗುರಿವಿನ ಮಹತ್ವವನ್ನು ಸಾರುವ ನೃತ್ಯವನ್ನು ಪ್ರದರ್ಶಿಸಿದರು. ಸಭೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಸದಸ್ಯರಾದ ಡಾ.ಆಸಿಫ್ ಬ್ಯಾರಿ ,ಸಂಯೋಜಕರಾದ ಆಕಾಶ್ ಹಾಗು ಎಲ್ಲಾ ವಿಭಾಗಳ ಪ್ರಾಂಶುಪಾಲರು, ಶಿಕ್ಷಕ – ರಕ್ಷಕ ಸಂಘದ ಮುಖ್ಯಸಲಹೆಗಾರರಾದ ಹಾಜಿ ಅಬುಷೇಕ್ ಸಾಹೇಬ್ ಹಾಗು ಪದಾಧಿಕಾರಿಗಳು ಮತ್ತು ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ಸಹ ಶಿಕ್ಷಕಿಯರಾದ ಜೆನಿಫರ್ ರವರು ಸ್ವಾಗತಿಸಿ, ಸಂಗೀತ ವಂದಿಸಿದರು,ಎಲಿಟರವರು ಕಾರ್ಯಕ್ರಮವನ್ನು ನಿರೂಪಿಸಿದರು.

     

  • ಗಿಳಿಯಾರು ಯುವಕ ಮಂಡಲಕ್ಕೆ ನೂತನ ಅಧ್ಯಕ್ಷರಾಗಿ ಶೇಖರ್ ಜಿ ಗರಡಿಮಕ್ಕಿ ಆಯ್ಕೆ

    ಗಿಳಿಯಾರು ಯುವಕ ಮಂಡಲಕ್ಕೆ ನೂತನ ಅಧ್ಯಕ್ಷರಾಗಿ ಶೇಖರ್ ಜಿ ಗರಡಿಮಕ್ಕಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗಿಳಿಯಾರು ಯುವಕ ಮಂಡಲ ಗಿಳಿಯಾರು ಇದರ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೇಖರ್ ಜಿ ಗರಡಿಮಕ್ಕಿ ಆಯ್ಕೆಯಾಗಿದರು. ಭಾನುವಾರ ಅಲ್ಸೆಕೆರೆ ಮಹಾಲಿಂಗೇಶ್ವರನ ದೇವಸ್ಥಾನ ಸಭಾಂಗಣದಲ್ಲಿ‌ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
    ಉಪಾಧ್ಯಕ್ಷರು ಸುಭಾಷ್ ಪೂಜಾರಿ ಕಾರ್ಯದರ್ಶಿ ಅಕ್ಷಯ್ ಸೋಮಯಾಜಿ ,ಜೊತೆ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ,ಕೋಶಾಧಿಕಾರಿಯಾಗಿ ನಂದೀಶ್ ಹೇರಳೆ ,ಜೊತೆ ಕೋಶಾಧಿಕಾರಿಯಾಗಿ ನಯನ ಗಿಳಿಯಾರು ಆಯ್ಕೆಯಾದರು.ಸಭೆಯ ಅಧ್ಯಕ್ಷತೆಯನ್ನು ಹಾಲಿ ಅಧ್ಯಕ್ಷ ರಾಮಚಂದ್ರ ಆಚಾರ್ಯ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರ್,ಮಾಜಿ‌ ಅಧ್ಯಕ್ಷರಾದ ಯೋಗಾನಂದ ಶೆಟ್ಟಿ ಮತ್ತಿತರರು ಸದಸ್ಯರು ಇದ್ದರು.

  • ಕೋಟ :ಜಟ್ಟಿಮನೆ ಕರಿಯ ಗುರಿಕಾರ ಇನ್ನಿಲ್ಲ

    ಕೋಟ :ಜಟ್ಟಿಮನೆ ಕರಿಯ ಗುರಿಕಾರ ಇನ್ನಿಲ್ಲ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಮಣೂರು ಪಡುಕರೆ ಜಟ್ಟಿಮನೆ ಕರಿಯ ಗುರಿಕಾರ 76.ವ ಭಾನುವಾರ ರಾತ್ರಿ ನಿಧನರಾದರು.

    ಗ್ರಾಮದ ಹಿರಿಯ ಪಾರಂಪರಿಕ ಗುರಿಕಾರ ಎಂಬ ಖ್ಯಾತಿ ಪಡೆದ ಶ್ರೀಯುತರು ಜಟ್ಟಿಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿ, ಮಾರಿಬಲೆಯ ಮೂಲಕ ಮೀನುಗಾರಿಕೆ,ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದರು. ಪತ್ನಿ, ಮೂವರು ಪುತ್ರ, ಪುತ್ರಿಯರನ್ನು ಅಗಲಿದ್ದಾರೆ.

  • ಕೋಟ: ಮೀನುಗಾರರ ಸಮಸ್ಯೆ ಹಂತ ಹಂತವಾಗಿ ಪರಿಹಾರ: ಸಚಿವ ಮಂಕಾಳ ವೈದ್ಯ

    ಕೋಟ: ಮೀನುಗಾರರ ಸಮಸ್ಯೆ ಹಂತ ಹಂತವಾಗಿ ಪರಿಹಾರ: ಸಚಿವ ಮಂಕಾಳ ವೈದ್ಯ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ :ಮೀನುಗಾರರ ಸಮಸ್ಯೆಗಳು ಹಂತ ಹಂತಗಳಲ್ಲಿ ಬಗೆಹರಿಸುವ ಇಚ್ಛಾಶಕ್ತಿ ನಮ್ಮ ಸರಕಾರಕ್ಕಿದೆ ಎಂದು ಬಂದರು, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು. ಅವರು ರವಿವಾರ ಕೋಡಿಕನ್ಯಾಣ ಮೀನುಗಾರಿಕೆ ಬಂದರಿನ ವೀಕ್ಷಣೆಗೆ ಆಗಮಿಸಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು.

    ಕಡಲ್ಕೊರೆತ ಸಮಸ್ಯೆ ಕಾಸರಗೋಡಿನಿಂದ ಕಾರವಾರ- ಗೋವಾದ ತನಕ ಹಬ್ಬಿದೆ. ಇದಕ್ಕೆ ತಾತ್ಕಾಲಿಕ ಪರಿಹಾರ ಸಮಂಜಸವಲ್ಲ. ಹೀಗಾಗಿ ತಜ್ಞರ ಸಮಿತಿಯನ್ನು ನೇಮಿಸಿದ್ದು ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ, ತಾತ್ಕಾಲಿಕ ಪರಿಹಾರ ಬೇಕಾದಲ್ಲಿ ವಿಮರ್ಶೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

    ಕೋಡಿ ಕನ್ಯಾಣ ಸಮಸ್ಯೆಗೂ ಪರಿಹಾರ: ಕೋಡಿ ಕನ್ಯಾಣ, ಹಂಗಾರಕಟ್ಟೆ, ಬೆಂಗ್ರೆ ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇವರ ದುಃಸ್ಥಿತಿ ನೋಡಿ ನನಗೆ ದುಃಖವಾಗಿದೆ. ಹೀಗಾಗಿ ಹೂಳೆತ್ತುವುದು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮೀನುಗಾರಿಕೆ, ಬಂದರು ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಲಾಗುವುದು ಎಂದರು.

    ಕೇಂದ್ರ ಸರಕಾರದ ಸಹಕಾರ ಬೇಕು:- ಬಂದರು, ಮೀನುಗಾರಿಕೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರದ ಅನುದಾನ ಸಾಕಾಗುವುದಿಲ್ಲ. ಹೀಗಾಗಿ ಕೇಂದ್ರ ಸರಕಾರದಲ್ಲಿ ಅನುದಾನಕ್ಕೆ ಬೇಡಿಕೆ ಇಡಲಾಗುತ್ತದೆ ಎಂದರು.

    ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೊಗವೀರ ಮುಖಂಡ ಡಾ.ಜಿ.ಶಂಕರ್, ಆನಂದ ಸಿ.ಕುಂದರ್, ಮೀನುಗಾರಿಕೆ, ಬಂದರು ಇಲಾಖೆ ಅಧಿಕಾ ಕ್ಯಾ.ಸ್ವಾಮಿ, ಅಂಜನಾ ದೇವಿ, ಶ್ರೀನಿವಾಸ ಮೂರ್ತಿ, ಢಯಾಸ್ ಹಾಗೂ ಮೀನುಗಾರ ಪ್ರಮುಖರು ಉಪಸ್ಥಿತರಿದ್ದರು.

  • ಶ್ರೀಮಠ ಜು.3ರಿಂದ ಬಾಳೆಕುದ್ರು ಸ್ವಾಮೀಜಿ ಅವರ ಚಾತುರ್ಮಾಸ್ಯ ವೃತ

    ಶ್ರೀಮಠ ಜು.3ರಿಂದ ಬಾಳೆಕುದ್ರು ಸ್ವಾಮೀಜಿ ಅವರ ಚಾತುರ್ಮಾಸ್ಯ ವೃತ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿ ಅವರು ಲೋಕಲ್ಯಾಣಕ್ಕಾಗಿ ಮತ್ತು ಭಕ್ತರ ಶ್ರೇಯಸ್ಸಿಗಾಗಿ ಇದೇ 3ರಿಂದ ಚಾತುರ್ಮಾಸ್ಯ ವೃತವನ್ನು ಶ್ರೀಮಠದ ಶ್ರೀಲಕ್ಷ್ಮೀ ನೃಸಿಂಹ ದೇವರ ಸನ್ನಿಧಿಯಲ್ಲಿ ಕೈಗೊಳ್ಳಲಿದ್ದಾರೆ.

    ಸ್ವಾಮೀಜಿ ಅವರ ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತೀದಿನ ಬೆಳಿಗ್ಗೆ 10.30 ರಿಂದ 12.30 ರವರೆಗೆ ಸ್ಥಳೀಯ ಹಾಗೂ ಪರವೂರಿನ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಶ್ರೀವಿಷ್ಣು ಸಹಸ್ರನಾಮ ಪಠಣ ಮತ್ತು ಪ್ರತೀ ನಿತ್ಯ ಅನ್ನದಾನ ಸೇವೆಯೂ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

  • ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ವೈದ್ಯರ ದಿನಾಚರಣೆ

    ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ವೈದ್ಯರ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ವತಿಯಿಂದ ವೈದ್ಯರ ದಿನಾಚರಣೆ ಪ್ರಯುಕ್ತ ಕೋಟ ಮೂರ್ ಕೈ ಯಲ್ಲಿರುವ ಖ್ಯಾತ ವೈದ್ಯ ಡಾ. ಸರ್ವೋತ್ತಮ ಶೆಟ್ಟಿ ಯವರನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಇವರ ನೇತೃತ್ವದಲ್ಲಿ ಕ್ಲಬ್‍ನ ಕಾರ್ಯದರ್ಶಿ ಮಹೇಂದ್ರ ಆಚಾರ್ ಮಧುವನ, ಕೋಶಾಧಿಕಾರಿ ವಸಂತ್.ವಿ.ಶೆಟ್ಟಿ ಅಚ್ಲಾಡಿ ಹಾಗೂ ಸದಸ್ಯರು ವೈದ್ಯರ ಮನೆಗೆ ತೆರಳಿ ಗೌರವಿಸಿದರು.

  • ಯಕ್ಷಗಾನಕ್ಕೆ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ: ಕೋಟ ಶ್ರೀನಿವಾಸ ಪೂಜಾರಿ

    ಯಕ್ಷಗಾನಕ್ಕೆ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ: ಕೋಟ ಶ್ರೀನಿವಾಸ ಪೂಜಾರಿ

    ಯಕ್ಷಾಂತರಂಗ ಕೋಟ ‘ಯಕ್ಷ ವಿಭೂಷಣ’ ನೂತನ ಯಕ್ಷಾಭರಣ ಅನಾವರಣ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ತೆಂಕು, ಬಡಗು, ಬಡಾಬಡಗು ತಿಟ್ಟಿನ ಯಕ್ಷ ನೆಲದಲ್ಲಿ ಸಚಿವನಾಗಿ ಒಂದಿಷ್ಟು ಕೆಲಸ ಮಾಡಿದ ಸಾರ್ಥಕತೆ, ಧನ್ಯತೆ ನನಗಿದೆ. ಈ ಮೂರು ನೆಲದಲ್ಲಿ ಮನೆ ಮನೆಗಳಲ್ಲಿ ಯಕ್ಷಗಾನದ ಸದ್ದು ಮಾಡುತ್ತಿರುವುದನ್ನು ಕಂಡಿದ್ದೇನೆ. ಹಾಗಾಗಿ ಯಕ್ಷಗಾನ ಮನುಷ್ಯರಲ್ಲಿ ಶಕ್ತಿಯನ್ನು, ಶೃದ್ದೆಯನ್ನು, ಆಸಕ್ತಿಯನ್ನು, ಆತ್ಮವಿಶ್ವಾಸವನ್ನು ಇಮ್ಮಡಿಯಾಗಿಸುತ್ತದೆ. ಉತ್ತಮ ವಾಕ್ಚಾತುರ್ಯವು ಯಕ್ಷಗಾನದಿಂದ ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಯಕ್ಷಗಾನ ತನ್ನ ಪರಿದಿಯನ್ನು ಮೀರಿ ಬೆಳೆಯುತ್ತಿದೆ. ಯಕ್ಷಗಾನದಲ್ಲಿ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ. ಅಂತವರ ಗರಡಿಯಲ್ಲಿ ಬೆಳೆದ ಕಲಾವಿದರನೇಕರನ್ನು ಒಡಗೂಡಿ ಕೃಷ್ಣಮೂರ್ತಿ ಉರಾಳರು ತಂಡವೊಂದನ್ನು ಕಟ್ಟಿ ಕಾರಂತ ಥೀಂ ಪಾರ್ಕ್‍ನಲ್ಲಿ ನೆಲೆಸಿ, ಅವರ ಹೆಸರಿನ ಪ್ರಶಸ್ತಿಯನ್ನು ನೀಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯಕ್ಷಗಾನ ವಿಭೂಷಣ ಉದ್ಘಾಟಿಸಿ ಮಾತನ್ನಾಡಿದರು.

    ತೆಕ್ಕಟ್ಟೆ ಹಯಗ್ರೀವದಲ್ಲಿ ಯಕ್ಷಾಂತರಂಗ ವ್ಯವಸಾಯಿ ಯಕ್ಷತಂಡ ಕೋಟ ಇವರ ಸಪ್ತಮ ವಾರ್ಷಿಕೋತ್ಸವವು ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಹಕಾರದೊಂದಿಗೆ ಜು.1ರಂದು ‘ಯಕ್ಷ ವಿಭೂಷಣ-2023’ ನೂತನ ಯಕ್ಷಾಭರಣವನ್ನು ಉದ್ಘಾಟಿಸಿ ಕೋಟ ಶ್ರೀನಿವಾಸ ಪೂಜಾರಿ ಮಾತನ್ನಾಡಿದರು.

    ಯಕ್ಷಗಾನದ ಮಹಾನ್ ಕಲಾವಿದರಿಂದ ಕೂಡಿದ ತಂಡ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಯಕ್ಷ ತರಗತಿಯನ್ನು ಮಾಡಿ ಅನೇಕ ಕಲಾವಿದರನ್ನು ಯಕ್ಷ ರಂಗಭೂಮಿಗೆ ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘ್ಯಯೋಗ್ಯ ವಿಚಾರ. ಪರಿಪೂರ್ಣತೆಯನ್ನು ಸಾಧಿಸುವುದಕ್ಕೆ ಈ ತಂಡಕ್ಕೆ ವೇಷಭೂಷಣದ ಕೊರತೆ ಈವರೆಗೆ ತೊಡಕಾಗಿದ್ದು ಶ್ರೀನಿವಾಸ ಪೂಜಾರರಿಂದ ಸಾಧ್ಯವಾದದ್ದು ಸಂತಸ ತಂದಿದೆ ಎಂದು ದೀಪ ಪ್ರಜ್ವಲನೆ ಮಾಡಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಭಿನಂದಿಸಿದರು. ಇದೇ ಸಂಭ್ರಮದಲ್ಲಿ ಹಿರಿಯ ಹಾಸ್ಯಗಾರರಾದ ಕಮಲಶಿಲೆ ಮಹಾಬಲ ದೇವಾಡಿಗರಿಗೆ ಕಾರಂತ ಯಕ್ಷಾಂತರಂಗ ಪ್ರಶಸ್ತಿ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು.

    ಸಭೆಯಲ್ಲಿ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆನಂದ ಸಿ. ಕುಂದರ್ ವಹಿಸಿದ್ದರು. ಗೌರವ ಉಪಸ್ಥಿತಿಯಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಡಾ. ಜಗದೀಶ್ ಶೆಟ್ಟಿ ಬ್ರಹ್ಮಾವರ, ಕೆ.ಪಿ. ಶೇಖರ್, ಸುಬ್ರಾಯ ಆಚಾರ್ ಮಣೂರು, ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಅಧ್ಯಕ್ಷ ಹೆರಿಯ ಮಾಸ್ಟರ್ ಇದ್ದರು. ಯಕ್ಷಕವಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅಭಿನಂದನಾ ನುಡಿಗಳನ್ನಾಡಿದರು. ಕಲಾವಿದ ಕೃಷ್ಣಮೂರ್ತಿ ಉರಾಳ ಸ್ವಾಗತಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಾಂತರಂಗ ಕೋಟ ಸದಸ್ಯರಿಂದ ಕವಿ ನಿತ್ಯಾನಂದ ಅವಧೂತ ವಿರಚಿತ ಯಕ್ಷಗಾನ “ಕನಕಾಂಗಿ ಕಲ್ಯಾಣ” ರಂಗದಲ್ಲಿ ಪ್ರಸ್ತುತಿಗೊಂಡಿತು.

  • ರೋಟರಿ ಕ್ಲಬ್ ಕೋಟ – ಸಾಲಿಗ್ರಾಮ ಪದಪ್ರದಾನ

    ರೋಟರಿ ಕ್ಲಬ್ ಕೋಟ – ಸಾಲಿಗ್ರಾಮ ಪದಪ್ರದಾನ

    ಸೇವಾ ಮನೋಭಾವನೆಯಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ – ಜಗದೀಶ್ ನಾವಡ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ರೋಟರಿಯಂತಹ ಸಂಘ-ಸಂಸ್ಥೆಗಳು ಸೇವಾ ಮನೋಭಾವನೆಯನ್ನು ಕಲಿಸಿಕೊಡುತ್ತದೆ ಹಾಗೂ ಸೇವೆಯ ಮೂಲಕ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಗದೀಶ ನಾವಡ ತಿಳಿಸಿದರು.

    ಅವರು ಜೂ.30ರಂದು ಕೋಟದ ಸಮುದ್ಯತಾ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ಪದಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನೂತನ ಅಧ್ಯಕ್ಷರಾಗಿ ದೇವಪ್ಪ ಪಟಗಾರ್ ಹಾಗೂ ಕಾರ್ಯದರ್ಶಿ ತಿಮ್ಮ ಪೂಜಾರಿ ಮತ್ತು ತಂಡದವರಿಗೆ ರೋಟರಿ ವಲಯ 2ರ ಸಹಾಯಕ ಗವರ್ನರ್ ನರಸಿಂಹ ಪ್ರಭು ಪದಪ್ರದಾನ ನೆರವೇರಿಸಿ ಮಾತನಾಡಿ, ರೋಟರಿ ಕೋಟ-ಸಾಲಿಗ್ರಾಮ ಸಂಸ್ಥೆಗೆ ಸಾಕಷ್ಟು ಉತ್ತಮ ಇತಿಹಾಸವಿದ್ದು, ಯಶಸ್ವಿ ರೋಟರಿಗಳು ಈ ಸಂಘದ ಮೂಲಕ ಸಮಾಜಕ್ಕೆ ಪರಿಚಯವಾಗಿದ್ದಾರೆ. ಈ ಬಾರಿ ಉತ್ತಮ ಕಾರ್ಯಕ್ರಮಗಳನ್ನು ನಾವು ಹಾಕಿಕೊಳ್ಳಲಿದ್ದೇವೆ ಎಂದರು.

    ಈ ಸಂದರ್ಭ ಪರಿಸರ ಕಾಳಜಿಯ ಕಾರ್ಯಕ್ರಮವನ್ನು ರೂಪಿಸುತ್ತಿರುವ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಹಿರಿಯ ರೈತ ಚಿತ್ರಪಾಡಿ ಸಂಜೀವ ಪೂಜಾರಿಯವರನ್ನು ಸಮ್ಮಾನಿಸಲಾಯಿತು. ಗೀತಾನಂದ ಫೌಂಡೇಶನ್ ಮೂಲಕ ಸಮಾಜ ಸೇವೆಗೈಯುತ್ತಿರುವ ಆನಂದ ಸಿ.ಕುಂದರ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿ ವೇತನ, ಆರೋಗ್ಯ ನಿಧಿ, ಸಹಾಯಧನ ಹಸ್ತಾಂತರಿಸಲಾಯಿತು.

    ವಲಯ ಪ್ರತಿನಿಧಿ ಮಂಜುನಾಥ ಕಾಂಚನ್, ವಲಯ ತರಬೇತುದಾರ ಗಜೇಂದ್ರ ಶೆಟ್ಟಿ, 2022ನೇ ಸಾಲಿನ ಅಧ್ಯಕ್ಷ ಅರುಣ ಕುಂದರ್ ಹಾಗೂ ಮಾಜಿ ಕಾರ್ಯದರ್ಶಿ ಯೋಗೀಶ್ ಕುಮಾರ್ ಉಪಸ್ಥಿತರಿದ್ದರು.

    ರೋಟರಿ ಸದಸ್ಯ ನಾಗರಾಜ್ ನಾೈರಿ ಸ್ವಾಗತಿಸಿ, ರಾಜೇಂದ್ರ ಸುವರ್ಣ, ಶ್ರೀಕಾಂತ್ ಶೆಣೈ, ಗಣೇಶ್ ಹೊಳ್ಳ, ಮಾಧವ ಪೂಜಾರಿ ಅತಿಥಿಗಳನ್ನು ಪರಿಚಯಸಿದರು. ಕ್ಲಬ್‍ನ ಮಾಜಿ ಅಧ್ಯಕ್ಷ ಉಮೇಶ್ ಪ್ರಭು, ಕಾರ್ಯಕ್ರಮ ನಿರೂಪಿದರು.